ನವದೆಹಲಿ: ಅನುಮತಿ ಪಡೆಯದೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಬಂಧಿಸಿದಂತೆ ಇಲಾಖೆಯ ಯಾವುದೇ ಅಧಿಕಾರಿಯು ವರ್ತಕರನ್ನು ಸಂಪರ್ಕಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಜಿಎಸ್ಟಿ ಅಧಿಕಾರಿಗಳೆಂದು ಹೇಳಿಕೊಂಡು ವರ್ತಕರ ಬಳಿ ಹಣ ವಸೂಲಿ ಮಾಡಿರುವ ಕುರಿತು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಸಂಬಂಧ ಜಿಎಸ್ಟಿ ದೆಹಲಿ ವಲಯದ ಮುಖ್ಯ ಆಯುಕ್ತರ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ವರ್ತಕರು ಹಾಗೂ ವ್ಯಾಪಾರೀ ಕೇಂದ್ರಗಳಿಗೆ ಅನುಮತಿಯಿಲ್ಲದೆ ಇಲಾಖೆಯ ಯಾವುದೇ ಅಧಿಕಾರಿ ಭೇಟಿ ನೀಡುವಂತಿಲ್ಲ ಎಂದಿದೆ.
ವರ್ತಕರಿಗೆ ಜಿಎಸ್ಟಿ ಅಳವಡಿಕೆಯಲ್ಲಿ ಸುಲಭವಾಗಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸಲಿದೆ. ಈ ಸಂಬಂಧ ವ್ಯಾಪಾರಿಗಳು ಯಾವುದೇ ರೀತಿಯ ತೊಂದರೆ ಎದುರಾದರೆ ದೂರು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.