ಹಾವೇರಿ: ಸಾಲುಮರದ ತಿಮ್ಮಕ್ಕ ನೇತೃತ್ವದಲ್ಲಿ ಭಾನುವಾರ ನೆಟ್ಟ 12 ಸಾವಿರ ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ಅಗಡಿಯ ಅಕ್ಕಿಮಠದ ವತಿಯಿಂದ ಆಯೋಜಿಸಿದ್ದ ‘ಪರಿಸರ ಜಾತ್ರೆ–2017’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಿಮ್ಮಕ್ಕ ಅವರ ಚಿಕಿತ್ಸೆಗಾಗಿ ವೈಯಕ್ತಿಕವಾಗಿ ₹10 ಸಾವಿರ ನೆರವು ನೀಡುವುದಾಗಿ ಭರವಸೆ ನೀಡಿದರು.
ಮಠದ ಗುರುಲಿಂಗ ಸ್ವಾಮೀಜಿ, ಕಾರ್ಯಕ್ರಮದ ವೇದಿಕೆಯಲ್ಲಿ ಹಾಗೂ ಸಭಿಕರ ಮುಂದೆ ಜೋಳಿಗೆ ಹಿಡಿದು ಭಿಕ್ಷೆ ಬೇಡುವ ಮೂಲಕ ಬಂದ ಹಣವನ್ನು ಸಾಲುಮರ ತಿಮ್ಮಕ್ಕನವರ ಚಿಕಿತ್ಸೆಗಾಗಿ ನೀಡಿದರು.
ಪರಿಸರ ಜಾತ್ರೆಗೆ ಚಾಲನೆ: ಮಧ್ಯಾಹ್ನ 12ಕ್ಕೆ ಸಸಿಯೊಂದನ್ನು ನೆಡುವ ಮೂಲಕ ಸಾಲುಮರದ ತಿಮ್ಮಕ್ಕ ಪರಿಸರ ಜಾತ್ರೆಗೆ ಚಾಲನೆ ನೀಡಿದರು. ಇದೇ ಸಮಯಕ್ಕೆ ತಾಲ್ಲೂಕಿನ 40 ಗ್ರಾಮಗಳಲ್ಲಿ ಏಕಕಾಲಕ್ಕೆ 12 ಸಾವಿರ ಸಸಿಗಳನ್ನು ನೆಡಲಾಯಿತು.
ಅಸಮಾನತೆ ಇಲ್ಲವಾಗಬೇಕು: ‘ಅರಣ್ಯ ನಾಶ ಮಾಡಿ ಭೂಮಿಯ ಹಕ್ಕು ಪತ್ರ ನೀಡುವ ಬದಲಾಗಿ, ಭೂ ಮಾಲೀಕರ ಜಮೀನನ್ನು ಬಡವರಿಗೆ ಹಂಚಿಕೆ ಮಾಡುವ ಮೂಲಕ ಅಸಮಾನತೆ ತೊಲಗಿಸಬೇಕು’ ಎಂದು ಚಿತ್ರನಟ ಚೇತನ್ ಹೇಳಿದರು.