ಉಡುಪಿ: ಗುರುಪೂರ್ಣಿಮೆ ಪ್ರಯುಕ್ತ ಭಾನುವಾರ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ತಮಗೆ ದೀಕ್ಷೆ ನೀಡಿದ ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾದಪೂಜೆ ಮಾಡಿದರು.
‘ಗುರುಪೂರ್ಣಿಮೆ ದಿನದಂದೇ ಉಡುಪಿಯಲ್ಲಿ ಶ್ರೀಗಳಿಗೆ ಪಾದಪೂಜೆ ಮಾಡುವ ಅವಕಾಶ ನನಗೆ 17 ವರ್ಷಗಳ ಬಳಿಕ ಲಭಿಸಿದೆ. ಗುರುಗಳು ಚಾತುರ್ಮಾಸದ ಪ್ರಯುಕ್ತ ಮುಂಬೈ, ಚೆನ್ನೈಗಳಲ್ಲಿ ಇದ್ದಾಗಲೂ ನಾನು ಅಲ್ಲಿಗೆ ಹೋಗಿ ಭೇಟಿ ಮಾಡಿದ್ದೆ’ ಎಂದು ಅವರು ಬಳಿಕ ಪತ್ರಕರ್ತರಿಗೆ ತಿಳಿಸಿದರು.
‘ಧಾರ್ಮಿಕ ಕೇಂದ್ರವಾದ ಮಠದಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ’ ಎಂದರು.
ಉಮಾಭಾರತಿ ಅವರು ಬಳಿಕ ಪಾಜಕ ಕ್ಷೇತ್ರಕ್ಕೆ ಭೇಟಿ ನೀಡಿದರು. ಸಂಜೆ ಮಠದಲ್ಲಿ ನಡೆದ ಗುರುಪೂರ್ಣಿಮೆ ಪೂಜೆಯಲ್ಲೂ ಭಾಗವಹಿಸಿದರು.
* ನನ್ನ ಗುರು ದೇಶ ಕಂಡ ಶ್ರೇಷ್ಠ ಸನ್ಯಾಸಿ ಮಾತ್ರವಲ್ಲದೇ, ಸಾಮಾಜಿಕವಾಗಿ ಆನೇಕ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ