ನವದೆಹಲಿ: ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ನೇಮಕ ಮಾಡಿದ ಉನ್ನತಾಧಿಕಾರದ ಸಮಿತಿ ವರದಿ ನೀಡಿದೆ.
ಭೂ ಸೇನೆಯ ಮಾಜಿ ಮುಖ್ಯಸ್ಥರಾದ ಜನರಲ್ ಎನ್.ಸಿ.ವಿಜ್, ಜನರಲ್ ದೀಪಕ್ ಕಪೂರ್, ಲೆಫ್ಟಿನೆಂಟ್ ಜನರಲ್ ಶಂತನು ಚೌಧರಿ ಹಾಗೂ ಇನ್ನೂ ಕೆಲವು ನಿವೃತ್ತ ಸೇನಾಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಹಿರಿಯ ಅಧಿಕಾರಿಗಳಾದ ಲೆಫ್ಟಿನೆಂಟ್ ಜನರಲ್ ಜಿ.ಎಸ್.ಸಿಹೊಟಾ, ಮೇಜರ್ ಜನರಲ್ಗಳಾದ ತೇಜೇಂದರ್ ಸಿಂಗ್, ಟಿ.ಕೆ.ಕೌಲ್, ಎ.ಆರ್.ಕುಮಾರ್, ವಿ.ಎಸ್.ಯಾದವ್ ಮತ್ತು ಆರ್.ಕೆ. ಹೂಡಾ ಅವರ ಹೆಸರುಗಳೂ ವರದಿಯಲ್ಲಿ ಇವೆ.ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಯೋಧರಿಗಾಗಿ ನಿರ್ಮಿಸಲಾಗಿದ್ದ ಅಪಾರ್ಟ್ಮೆಂಟ್ನಲ್ಲಿ ಮನೆ ಪಡೆಯಲು ಸೇನೆಯ ಹಿರಿಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು 199 ಪುಟಗಳ ವರದಿಯಲ್ಲಿ ಹೇಳಲಾಗಿದೆ. ಹಗರಣದಲ್ಲಿ ಭಾಗಿಯಾದ ನಿವೃತ್ತ ಅಧಿಕಾರಿಗಳಿಗೆ ಸರ್ಕಾರದಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ಶಿಫಾರಸು ಮಾಡಲಾಗಿದೆ.