ಮಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಅವರ ಪಾತ್ರ ಇರುವ ಶಂಕೆ ವ್ಯಕ್ತವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾನುವಾರ ತಡರಾತ್ರಿ ಪೊಲೀಸರು ಸತ್ಯಜಿತ್ ಅವರ ಮನೆ ಮೇಲೆ ದಾಳಿ ನಡೆಸಿದ್ದು ಅವರು ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸತ್ಯಜಿತ್ ಅವರು ಶವಯಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟಕ್ಕೆ ಪಿತೂರಿ ನಡೆಸಿದ್ದಾರೆ ಎನ್ನಲಾಗಿದೆ.
’ಕಲ್ಲು ತೂರಾಟಕ್ಕೆ ಪಿತೂರಿ ನಡೆಸಿದ ಆರೋಪದಲ್ಲಿ ಸುರತ್ಕಲ್ ಮೂಲದ ವ್ಯಕ್ತಿಯೊಬ್ಬರ ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ’ ಎಂದು ದಕ್ಷಿಣ ಕನ್ನಡ ಎಸ್ಪಿ ಸುದೀರ್ ಕುಮಾರ್ ರೆಡ್ಡಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಸತ್ಯಜಿತ್ ಈ ಹಿಂದೆ ಹಿಂದೂ ಜಾಗರಣ ವೇದಿಕೆಯ ಮುಂಚೂಣಿ ನಾಯಕರಾಗಿದ್ದರು.
ಮುಖ್ಯಮಂತ್ರಿ ಗರಂ ಬೆಂಗಳೂರು: ಮಂಗಳೂರು ಗಲಭೆಗೆ ನಿಯಂತ್ರಿಸದ ಪೊಲೀಸರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ರಾಜ್ಯದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವಾಗಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಕೂಡಲೇ ಸ್ಥಳೀಯ ಸಂಘಟನೆಗಳ ಮುಖಂಡರ ಸಭೆ ಕರೆದು ಶಾಂತಿ ನೆಲೆಸುವಂತೆ ಮಾಡಲು ಸೂಚನೆ ನೀಡಿದರು.
ಕಚೇರಿಯಲ್ಲೇ ಕುಳಿತು ಕೆಳ ಹಂತದ ಸಿಬ್ಬಂದಿಗೆ ನಿರ್ದೇಶನ ನೀಡಬೇಡಿ. ಠಾಣೆಗೆ ಹೋಗಿ ಕುಳಿತುಕೊಳ್ಳಿ ಎಂದು ಅವರು ಸೂಚಿಸಿದ್ದಾರೆ.