ಪಟ್ನಾ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಹಾರದ ಉಪ ಮುಖ್ಯಮಂತ್ರಿ, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಮಗ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ಪಕ್ಷ ತಿರಸ್ಕರಿಸಿದೆ.
ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ತೇಜಸ್ವಿ ಯಾದವ್ ವಿರುದ್ಧವೂ ಗಂಭೀರ ಭ್ರಷ್ಟಾಚಾರ ಪ್ರಕರಣದ ದಾಖಲಿಸಲಾಗಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಈ ವಿಚಾರವಾಗಿ ಚರ್ಚೆ ನಡೆಸಲು ಆಡಳಿತಾರೂಢ ಮಿತ್ರಪಕ್ಷ ಜೆಡಿ(ಯು) ಮಂಗಳವಾರ ಸಭೆ ಕರೆದಿದೆ.
ಇದಕ್ಕೂ ಮುನ್ನ ಆರ್ಜೆಡಿ ಸಂಸದರು, ಶಾಸಕರು, ಹಿರಿಯ ನಾಯಕರು ಸೋಮವಾರವೇ ಸಭೆ ನಡೆಸಿ, ತೇಜಸ್ವಿ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷ ಬಿಜೆಪಿಯ ದ್ವೇಷದ ರಾಜಕೀಯಕ್ಕೆ ತೇಜಸ್ವಿ ಅವರು ತಕ್ಕ ತಿರುಗೇಟು ನೀಡಲಿ ಎಂದು ಪಕ್ಷದ ಮುಖಂಡರು ಸಲಹೆ ನೀಡಿದ್ದಾರೆ.