ಶ್ರೀನಗರ: ಕಲ್ಲುತೂರಾಟಗಾರರಿಂದ ರಕ್ಷಣೆ ಪಡೆಯುವುದಕ್ಕಾಗಿ ಸೇನೆಯು ಮಾನವಗುರಾಣಿಯನ್ನಾಗಿಸಿದ್ದ ಫಾರೂಕ್ ಅಹ್ಮದ್ ದರ್ ಅವರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಅಲ್ಲಿನ ಮಾನವಹಕ್ಕು ಆಯೋಗ ಸೂಚಿಸಿದೆ.
ಏಪ್ರಿಲ್ 9ರಂದು ಶ್ರೀನಗರ ಉಪಚುನಾವಣೆ ಸಂದರ್ಭ ದರ್ ಅವರನ್ನು ಸೇನೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸಿಕೊಳ್ಳಲಾಗಿತ್ತು. ಸೇನಾಧಿಕಾರಿ ಮೇಜರ್ ಲೀತುಲ್ ಗೊಗೊಯಿ ಅವರು ಈ ಕ್ರಮ ಕೈಗೊಂಡಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.
ಘಟನೆಗೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಪರಿಹಾರ ನೀಡಿದ ಬಗ್ಗೆ ಆರು ವಾರದ ಒಳಗಾಗಿ ವರದಿ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.