ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ಮಾಣದ ’ಒಂದು ಮೊಟ್ಟೆಯ ಕತೆ’ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಬಕ್ಕತಲೆಯವರ ಹಾಸ್ಯಮಯ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಹೊಸಬರೇ ಆಗಿದ್ದಾರೆ.
ಈ ಸಿನಿಮಾ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. ಬಿಡುಗಡೆಯಾದ ನಂತರವೂ ಇದೇ ‘ಹವಾ’ ಮುಂದುವರಿಸಿದೆ.
‘ಒಂದು ಮೊಟ್ಟೆಯ ಕತೆ’ ಚಿತ್ರತಂಡ ಮೊನ್ನೆ ಶನಿವಾರ ಮಹಾತ್ಮ ಗಾಂಧಿ ರಸ್ತೆಯ ‘ನಮ್ಮ ಮೆಟ್ರೊ’ ನಿಲ್ದಾಣದಲ್ಲಿ ಹೊಸ ಮಾದರಿಯಲ್ಲಿ ಪ್ರಚಾರ ನಡೆಸಿತ್ತು. ‘ಒಂದು ಮೊಟ್ಟೆಯ ಕತೆ’ ಎಂಬ ಶೀರ್ಷಿಕೆ ಹೊಂದಿದ ಟೀ–ಶರ್ಟ್ ಧರಿಸಿಕೊಂಡು ಯಲಚೇನಹಳ್ಳಿಯಿಂದ ನಾಗಸಂದ್ರ, ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮೆಟ್ರೊದಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರ ಗಮನ ಸೆಳೆಯಿತು.
ಅಲ್ಲದೆ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್ಗಳ ಬಳಿ ಇಳಿದು ಅಲ್ಲಿಗೊಮ್ಮೆ ಭೇಟಿ ನೀಡಿ ಚಿತ್ರದ ಬಗ್ಗೆ ಪ್ರೇಕ್ಷಕರ ಅನಿಸಿಕೆಗಳನ್ನು ಪಡೆದುಕೊಂಡಿತು. ಅಲ್ಲಿಂದ ಮತ್ತೆ ಮೆಟ್ರೊದಲ್ಲಿ ಪ್ರಯಾಣ... ಹೀಗೆ ಚಿತ್ರದ ಪ್ರಚಾರಕ್ಕಾಗಿ ಮೆಟ್ರೊವನ್ನು ಬಳಸಿಕೊಂಡಿತು ಈ ಸಿನಿಮಾ.
ಈ ತಂಡದಲ್ಲಿ ಚಿತ್ರದ ನಿರ್ದೇಶಕ ರಾಜ್ ಬಿ. ಶೆಟ್ಟಿ, ನಿರ್ಮಾಪಕ ಪವನ್ಕುಮಾರ್, ಸುಹಾಂತ್, ಅಮೃತಾ ನಾಯ್ಕ್ ಹಾಗೂ ಸಿನಿಮಾದ ತಾಂತ್ರಿಕ ವರ್ಗದವರು ಇದ್ದರು.