ಮುಂಬೈ: ವಿಚಾರವಾದಿ, ಸಿಪಿಐ ಮುಖಂಡ ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣದ ಆರೋಪಿ ಸಮೀರ್ ಗಾಯಕವಾಡ್ಗೆ ಜಾಮೀನು ನೀಡಿರುವ ಕೆಳ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಪಾನ್ಸರೆ ಅವರ ಕುಟುಂಬಸ್ಥರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ಇಂಥ ಪ್ರಮುಖ ಪ್ರಕರಣದಲ್ಲಿ ಜಾಮೀನು ನೀಡುವಾಗ ಅಪರಾಧದ ಸ್ವರೂಪ ಮತ್ತು ಅದಕ್ಕೆ ನೀಡಲಾಗುವ ಶಿಕ್ಷೆಯಂಥ ಇತರ ಅಂಶಗಳನ್ನೂ ಪರಿಗಣಿಸಬೇಕು. ದಾವೆದಾರರಿಗೆ ಆರೋಪಿ ಬೆದರಿಕೆ ಒಡ್ಡುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯೂ ಇದೆ’ ಎಂದು ಪಾನ್ಸರೆ ಅವರ ಪುತ್ರಿ ಮತ್ತು ಸೊಸೆ ಸಲ್ಲಿಸಿದ ಮೇಲ್ಮನವಿ ಅರ್ಜಿಯಲ್ಲಿ ಹೇಳಿದ್ದಾರೆ.
2015ರ ಫೆಬ್ರುವರಿ 16ರಂದು ಪಾನ್ಸರೆ ಮತ್ತು ಅವರ ಪತ್ನಿ ಬೆಳಗಿನ ವಾಕಿಂಗ್ಗೆ ತೆರಳಿದಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ ಪಾನ್ಸರೆ ಸಾವನ್ನಪ್ಪಿದ್ದರು. ಅದೇ ವರ್ಷ ಸೆಪ್ಟೆಂಬರ್ನಲ್ಲಿ ಪೊಲೀಸರು ಗಾಯಕವಾಡ್ನನ್ನು ಬಂಧಿಸಿದ್ದರು. ಕೊಲ್ಹಾಪುರ ಸೆಷನ್ಸ್ ನ್ಯಾಯಾಲಯವು ಜೂನ್ 17ರಂದು ಸಮೀರ್ಗೆ ಜಾಮೀನು ನೀಡಿದೆ. ಈತ ಬಲಪಂಥೀಯ ‘ಸನಾತನ್ ಸಂಸ್ಥಾ’ದ ಸದಸ್ಯ ಎಂಬ ಆಪಾದನೆಯೂ ಇದೆ.