ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ಸೋಮವಾರದಿಂದ (ಇದೇ 10ರಿಂದ) ರಾಜ್ಯದಲ್ಲೂ ಜಾರಿಯಾಗಿದೆ.
ಕೇಂದ್ರದ ಕಾಯ್ದೆ ಆಧರಿಸಿ 78 ಪುಟಗಳನ್ನು ಒಳಗೊಂಡ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರದ ಕಾಯ್ದೆಯಲ್ಲಿರುವ ನಿಯಮಗಳು, ದಂಡ, ಪ್ರಾಧಿಕಾರ ರಚನೆ ಎಲ್ಲವನ್ನೂ ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನ ಮಾಡಲಾಗಿದೆ.
ಬಡಾವಣೆ ಅಥವಾ ಅಪಾರ್ಟ್ಮೆಂಟ್ ಯೋಜನೆಗಳಲ್ಲಿ ಶೇ 60 ರಷ್ಟು ನಿವೇಶನ ಅಥವಾ ಫ್ಲ್ಯಾಟ್ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆ
ಗಳಿಗೆ ಮಾತ್ರ ರೇರಾ ಕಾಯ್ದೆಯ ನಿಯಮಗಳು ಅನ್ವಯವಾಗುವುದಿಲ್ಲ.
ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿ
ಸುವಲ್ಲಿ ವಿಫಲವಾದ ಪ್ರವರ್ತಕ ಸಂಸ್ಥೆಗಳು, ಬಿಲ್ಡರ್ಗಳಿಗೆ ಜೈಲು ಶಿಕ್ಷೆ, ದಂಡ ವಿಧಿಸಲು ಕಾಯ್ದೆ ಅವಕಾಶ ಕಲ್ಪಿಸಿದೆ.
ರಿಯಲ್ ಎಸ್ಟೇಟ್ ಸಂಸ್ಥೆಗಳು ಮಾತ್ರವಲ್ಲದೇ ಏಜೆಂಟರು ಇನ್ನು ಮುಂದೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾಯ್ದೆ ಅನ್ವಯ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಚಾಲ್ತಿಯಲ್ಲಿರುವ ಹಾಗೂ ಹೊಸದಾಗಿ ಆರಂಭಿಸುವ ಯೋಜನೆಗಳ ಸಂಪೂರ್ಣ ಮಾಹಿತಿ, ಪ್ರವರ್ತಕರ ವೈಯಕ್ತಿಕ ವಿವರ, ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿಯನ್ನು ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯವಾಗಲಿದೆ.
ಯಾರಿಗೆ ಅನ್ವಯವಾಗದು?
* ಅಪಾರ್ಟ್ಮೆಂಟ್ ಅಥವಾ ಬಡಾವಣೆ ನಿರ್ಮಿಸುವ ಮುನ್ನ ಸಂಬಂಧ ಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಯೋಜನೆಯ (ಪ್ಲಾನ್) ಅನ್ವಯ ವೇ ನಿರ್ಮಾಣ ಮಾಡಿರಬೇಕು.
* ಬಡಾವಣೆಯಾಗಿದ್ದಲ್ಲಿ ರಸ್ತೆ, ಬೀದಿದೀಪ, ಮೂಲಸೌಕರ್ಯಗಳನ್ನು ನಿರ್ವಹಣೆಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಿರಬೇಕು.
* ಅಪಾರ್ಟ್ಮೆಂಟ್ ಆಗಿದ್ದಲ್ಲಿ ಅದರ ವ್ಯಾಪ್ತಿಯಲ್ಲಿರುವ ಸಾಮಾನ್ಯ ಬಳಕೆಯ ಪ್ರದೇಶ, ಮೂಲಸೌಕರ್ಯಗಳ ಜವಾಬ್ದಾರಿಯನ್ನು ನೋಂದಾಯಿತ ವಸತಿದಾರರ ಸಂಘಕ್ಕೆ ಹಸ್ತಾಂತರಿಸಿರಬೇಕು.
* ಶೇ 60ರಷ್ಟು ನಿವೇಶನ/ ಫ್ಲ್ಯಾಟ್ಗಳನ್ನು ಕ್ರಯಪತ್ರ ಮಾಡಿ ಕೊಡದೆ ಇದ್ದಲ್ಲಿ, ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್) ಹಾಗೂ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ (ಒ.ಸಿ) ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರಬೇಕು. ಕಾಯ್ದೆ ಅನ್ವಯ ಯೋಜನೆ ಪೂರ್ಣಗೊಳಿಸಿರುವ ಬಗ್ಗೆ ಸಕ್ಷಮ ಸಂಸ್ಥೆಯಿಂದ(ಖಾಸಗಿ ವಾಸ್ತುಶಿಲ್ಪಿ) ದೃಢೀಕೃತ ದಾಖಲೆ ಸಲ್ಲಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.