ಬೆಂಗಳೂರು: ಬೊಮ್ಮನಹಳ್ಳಿ ಬಳಿಯ ವಿರಾಟನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಖಾಸಗಿ ಕಂಪೆನಿಯ ಲೆಕ್ಕಾಧಿಕಾರಿ ರೂಪಾದೇವಿ ಹಾಗೂ ಅದೇ ಕಂಪೆನಿಯ ಸಹಾಯಕ ಪುನೀತ್ ಅಲಿಯಾಸ್ ಪುಣ್ಯಕೋಟಿ ಬಂಧಿತರು. ಅವರಿಂದ 5 ಲಕ್ಷ ಮೌಲ್ಯದ 180 ಗ್ರಾಂ ಚಿನ್ನ ಹಾಗೂ 80 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ.
‘ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಆರೋಪಿಗಳು, ಹೊಸ ಬ್ಯೂಟಿ ಪಾರ್ಲರ್ ತೆರೆಯಲು ತಯಾರಿ ನಡೆಸಿದ್ದರು. ಇದಕ್ಕೆ ಹಣದ ಅಗತ್ಯವಿದ್ದರಿಂದ ಈ ಕಳ್ಳತನ ನಡೆಸಿದ್ದರು’ ಎಂದು ಪೊಲೀಸರು ತಿಳಿಸಿದರು.
ನಕಲಿ ಕೀ ಮಾಡಿಸಿದ್ದರು: ‘ಸ್ಥಳೀಯರೇ ಆದ ರೂಪಾದೇವಿ, ವಿರಾಟನಗರದ ಸಂಬಂಧಿಕರೊಬ್ಬರ ಮನೆಗೆ ಆಗಾಗ ಹೋಗಿ ಬರುತ್ತಿದ್ದರು. ಅವರ ಬಳಿಯ ಚಿನ್ನ, ಬೆಳ್ಳಿ ಆಭರಣಗಳನ್ನು ಗಮನಿಸುತ್ತಿದ್ದರು’.
‘ಪಾರ್ಲರ್ ತೆರೆಯಲು ಹಣದ ಅಗತ್ಯ ಬಿದ್ದಾಗಲೇ ಸ್ನೇಹಿತ ಪುನೀತ್ ಜತೆ ಸೇರಿ ಆ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದರು. ಏಪ್ರಿಲ್ ಕೊನೆಯ ವಾರದಲ್ಲಿ ಇಬ್ಬರೂ ಸೇರಿ ಮನೆಗೆ ಹೋಗಿ ಸಂಬಂಧಿಕರ ಗಮನ ಬೇರೆಡೆ ಸೆಳೆದು ಕೀ ಕದ್ದಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.