ರಾಣೆಬೆನ್ನೂರು: ಇಲ್ಲಿನ ನಗರ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರೇಕೆರೂರು ಘಟಕದ ಬಸ್ನಲ್ಲಿ ಬುಧವಾರ ರಾತ್ರಿ (ಜು.5) ಬಾಲಕಿಯೊಬ್ಬಳ ಮೇಲೆ ನಾಲ್ವರು ಸಿಬ್ಬಂದಿ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರು ಘಟಕದ ಚಾಲಕ ರಘು ಬಡಿಗೇರ (35), ಹಿರೇಕೆರೂರ ಘಟಕದ ನಿರ್ವಾಹಕ ವೈ.ಸಿ.ಕಟ್ಟೇಕಾರ (45), ಚಾಲಕ ವಿ.ಆರ್.ಹಿರೇಮಠ (45) ಎಂಬವರನ್ನು ಉಡುಪಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪ್ರಕರಣ ನಡೆದ ಬಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಉಡುಪಿಯಿಂದ ಹಿರೇಕೆರೂರಿಗೆ ಬಂದಿದ್ದ ಬಾಲಕಿಯೊಬ್ಬಳು, ಇದೇ 5ರಂದು ರಾತ್ರಿ ವಾಪಾಸಾಗುವ ವೇಳೆಯಲ್ಲಿ (ರಾಣೆಬೆನ್ನೂರು– ಕುಂದಾಪುರ) ಬಸ್ ಸಿಗದ ಕಾರಣ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ತಂಗಿದ್ದಳು.
ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಉಡುಪಿಗೆ ವಾಪಾಸಾದ ಬಳಿಕ ಆಕೆ, ಮನೆಯವರಲ್ಲಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.