ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯೆ ಸಮರ್ಥಿಸುವವರನ್ನು ತಿರಸ್ಕರಿಸಬೇಕು

ಸೌಹಾರ್ದ ಸಮಾವೇಶ ಉದ್ಘಾಟನೆಯಲ್ಲಿ ಲೇಖಕ ಡಾ.ರಾಜೇಂದ್ರ ಚೆನ್ನಿ
Last Updated 11 ಜುಲೈ 2017, 11:33 IST
ಅಕ್ಷರ ಗಾತ್ರ

ಮಂಗಳೂರು: ‘ಕೋಮುವಾದಿ ರಾಜಕೀಯವನ್ನೇ ನೆಚ್ಚಿಕೊಂಡಿರುವ ಕೆಲವು ರಾಜಕೀಯ ಪಕ್ಷಗಳು ಕೋಮು ಗಲಭೆಗಳ ಸಂದರ್ಭದಲ್ಲಿ ನಡೆಯುವ ಹತ್ಯೆಗಳನ್ನು ಸಮರ್ಥಿಸಿ, ಅವು ಕೊಲೆಗಳಲ್ಲ ಎಂದು ಒಪ್ಪಿಕೊಳ್ಳುವ ಮನಸ್ಥಿತಿಗೆ ಜನರನ್ನು ತಳ್ಳುತ್ತಿವೆ. ಇಂತಹ ಕೀಳು ರಾಜಕಾರಣ ಮಾಡುವವರನ್ನು ತಿರಸ್ಕರಿಸಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ’ ಎಂದು ಎಂದು ಲೇಖಕ ಡಾ.ರಾಜೇಂದ್ರ ಚೆನ್ನಿ ಹೇಳಿದರು.

ಜೆಡಿಎಸ್‌, ಸಿಪಿಎಂ, ಸಿಪಿಐ, ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ನಗರದ ಪುರಭವ ನದಲ್ಲಿ ಸೋಮವಾರ ಆಯೋಜಿಸಿದ್ದ ಸೌಹಾರ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕೋಮು ಗಲಭೆಗಳಲ್ಲಿ ನಡೆಯುವ ಕೊಲೆಗಳನ್ನು ನ್ಯಾಯ ಪ್ರಕ್ರಿಯೆಗೆ ಒಳಪಡಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ.

ನೈತಿಕವಾಗಿ ಈ ಹತ್ಯೆಗಳನ್ನು ಸಮರ್ಥಿಸುವವರು ಹೆಚ್ಚುತ್ತಿದ್ದಾರೆ. ಈಗ ನಮ್ಮ ರಾಷ್ಟ್ರದಲ್ಲಿ ಒಂದು ಪಕ್ಷ ಸೈದ್ಧಾಂತಿಕವಾಗಿಯೇ ಹಿಂಸೆ, ಕೊಲೆಗಳನ್ನು ಬೆಂಬಲಿಸುತ್ತಿದೆ. ಉಳಿದ ಕೆಲವರು ರಾಜಕೀಯ ಲೆಕ್ಕಾಚಾ ರಗಳನ್ನು ಹಾಕಿದ ಬಳಿಕ ಪ್ರತಿಕ್ರಿಯಿಸುವ ಹಂತಕ್ಕೆ ತಲುಪಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಮುವಾದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಅದು ಯಾವಾಗಲೂ ಅಧಿಕಾರ ಲಾಲಸೆಯ ರಾಜಕೀಯದ ಜೊತೆ ನಿಕಟವಾದ ನಂಟನ್ನು ಹೊಂದಿ ರುತ್ತದೆ. ಪ್ರತಿ ಬಾರಿಯೂ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮುಗಲಭೆಗ ಳನ್ನು ಸೃಷ್ಟಿಸಲಾಗುತ್ತಿದೆ. ಯಾವಾಗಲೂ ಇಂತಹ ಗಲಭೆಗಳಲ್ಲಿ ಅಮಾಯಕ ಜನರು ಬಲಿಯಾಗುತ್ತಾರೆ. ಕೋಮುವಾ ದವನ್ನು ನಿಯಂತ್ರಿಸದಿದ್ದರೆ ದೇಶ ಮತ್ತು ರಾಜ್ಯಗಳು ನಕ್ಷೆಯಲ್ಲಿ ಮಾತ್ರ ಉಳಿಯಲು ಸಾಧ್ಯ ಎಂದರು.

ಎಲ್ಲ ಬಗೆಯ ಕೋಮುವಾದ ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾದುದು. ಬಹು ಸಂಖ್ಯಾತರ ಕೋಮುವಾದ ಮತ್ತು ಅಲ್ಪಸಂಖ್ಯಾತರ ಕೋಮುವಾದ ಎಂದು ವಿಂಗಡಿಸುವುದೇ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ. ಕೋಮುವಾದಿ ಗಳು ಯಾವಾಗಲೂ ಬಂಡವಾಳಷಾಹಿ ಗಳ ನಂಟಿನಲ್ಲಿ ಇರುತ್ತಾರೆ. ಹಸಿವು, ಬಡತನದಿಂದ ನಡೆಯುವ ಸಾವುಗಳತ್ತ ಜನರ ಗಮನ ಸೆಳೆಯದಂತೆ ಮಾಡಲು ಕೋಮುಗಲಭೆಗಳನ್ನು ಸೃಷ್ಟಿಸಲು ಬಂಡ ವಾಳಷಾಹಿಗಳು ಪ್ರಚೋದನೆ ನೀಡು ತ್ತಾರೆ ಎಂದು ಹೇಳಿದರು.

ಹಿಂಸೆ ಮತ್ತು ಕೋಮುವಾದವನ್ನು ಜನತೆ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಆಗ ಜನಶಕ್ತಿಯನ್ನು ಆಧರಿಸಿದ ಚಳವಳಿಗಳು ಪ್ರಬಲವಾಗಿದ್ದವು. ಈಗ ಸಾಮಾನ್ಯ ಜನರು ಕೂಡ ಇದನ್ನು ಒಪ್ಪು ವಂತಾಗಿದೆ. ಈ ಬೆಳವಣಿಗೆಗೆ ಪ್ರಗತಿ ಪರರ ವೈಫಲ್ಯವೇ ಕಾರಣ. ಕೋಮುಶಕ್ತಿ ಬೆಳೆದಾಗ ಪ್ರಗತಿಪರರು ಒಂದಾಗಿ ಜನ ಶಕ್ತಿ ಕಟ್ಟುವ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಿಪಿಐ ಕೇಂದ್ರೀಯ ಸಮಿತಿ ಸದಸ್ಯ ಡಾ.ಸಿದ್ಧನಗೌಡ ಪಾಟೀಲ ಮಾತನಾಡಿ, ‘ಅಧಿಕಾರ ರಾಜಕಾರಣ ಹಾಗೂ ಕೋಮು ಗಲಭೆಗಳ ನಡುವೆ ನೇರವಾದ ನಂಟು ಇದೆ. ಗಲಭೆ ಮಾಡಿಸುವವರಿಗೂ ಇದರ ಪರಿಣಾಮಗಳ ಅರಿವು ಇರುತ್ತದೆ. ಗೋರಕ್ಷಣೆ ಮತ್ತು ಧರ್ಮದ ಹೆಸರಿನಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವವ ರನ್ನು ಧಿಕ್ಕರಿಸಬೇಕು. ಎಲ್ಲ ಮತಾಚರ ಣೆಗಳನ್ನು ಗೌರವಿಸುತ್ತಲೇ ಮತಾಂಧತೆಗೆ ಧಿಕ್ಕಾರ ಹೇಳಬೇಕು’ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಘಟಕದ ವಕ್ತಾರ ಎಸ್‌.ಎಲ್‌.ಭೋಜೇಗೌಡ ಮಾತನಾಡಿ ದರು. ಸಿಪಿಎಂ ಜಿಲ್ಲಾ ಮಂಡಳಿ ಕಾರ್ಯ ದರ್ಶಿ ವಸಂತ ಆಚಾರಿ, ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ.ಕೆ.ಕುಕ್ಯಾನ್‌, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ರವಿಕಿರಣ ಪುಣಚ, ದಲಿತ ಸಂಘರ್ಷ ಸಮಿತಿಯ ಮುಖಂಡ ಎಂ. ದೇವದಾಸ್ ವೇದಿಕೆಯಲ್ಲಿದ್ದರು.

***

62 ಜನರ ಹತ್ಯೆ
ಸಿಪಿಎಂ ರಾಜ್ಯ ಮಂಡಳಿ ಕಾರ್ಯ ದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಗೋವಿನ ಹೆಸರಿನ ದುಷ್ಟ ರಾಜಕಾರಣ ಹೆಚ್ಚಿದೆ. ಗೋರಕ್ಷ ಣೆಯ ಹೆಸರಿನಲ್ಲಿ ಈವರೆಗೆ 62 ಜನರನ್ನು ಹತ್ಯೆ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸು ತ್ತಿರುವ ಬಿಜೆಪಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿದೆ. ಸಂಘ ಪರಿವಾರ ಅದರ ಹಿಂದೆ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಕೋಮು ವಾದ ಮತ್ತು ಅಲ್ಪಸಂಖ್ಯಾತರ ಕೋಮು ವಾದ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT