ನವದೆಹಲಿ: ‘ಕಳೆದ ವರ್ಷ ಯೆಮನ್ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರರು ಅಪಹರಿಸಿದ್ದ, ಕೇರಳದ ಫಾದರ್ ಟಾಮ್ ಉಲುನ್ನಾಲಿಲ್ ಅವರು ಇನ್ನೂ ಜೀವಂತವಾಗಿದ್ದು, ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಸತತ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಯೆಮನ್ ತಿಳಿಸಿದೆ.
‘ಭಾರತದ ಪ್ರವಾಸದಲ್ಲಿರುವ ಯೆಮನ್ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಅಬ್ದುಲ್ ಮಲಿಕ್ ಅಬ್ದುಲ್ಜಲೀಲ್ ಅಲ್ ಮೆಖ್ಲಾಫಿ ಅವರು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ಮಾಹಿತಿ ನೀಡಿದ್ದಾರೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.