ಚಳ್ಳಕೆರೆ: ಸಂತಾನ ಶಕ್ತಿಹರಣ ಚಿಕಿತ್ಸೆಗೆ ಒಳಗಾದ 50ಕ್ಕೂ ಹೆಚ್ಚು ಮಹಿಳೆಯರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯ ಸಹ ನೀಡದೇ ನೆಲದಲ್ಲೇ ಮಲಗಿಸಿದ ಪ್ರಕರಣ ಮಂಗಳವಾರ ನಡೆದಿದೆ.
ವಿವಿಧ ಗ್ರಾಮಗಳಿಂದ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರನ್ನು ಕೊಠಡಿಯೊಂದರಲ್ಲಿ ಗುಂಪಾಗಿ ಮಲಗಿಸಲಾಗಿದೆ. ಸರಿಯಾಗಿ ಗಾಳಿ ಬೆಳಕು ಆಡದ ಕೊಠಡಿಯಲ್ಲಿ ಚಾಪೆಗಳೇ ಹಾಸಿಗೆಯಾದವು. ಐದು ಹಾಸಿಗೆಗಳು ಇರಿಸುವಂತಹ ಕೊಠಡಿಯಲ್ಲಿ 15ರಿಂದ 20 ಮಂದಿ ಮಹಿಳೆಯರನ್ನು ಮಲಗಿಸಲಾಗಿತ್ತು. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿಯೇ ಚಳ್ಳಕೆರೆ ಅತಿ ದೊಡ್ಡ ತಾಲ್ಲೂಕು ಕೇಂದ್ರವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ.
‘ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಿಳೆಯರನ್ನು ಒಂದೇ ಕೊಠಡಿಯಲ್ಲಿ ಮಲಗಿಸಿರುವುದು ಸರಿಯಲ್ಲ. ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಉಳಿಯಲು ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಚಿಕ್ಕಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದಿದ್ದ ರೋಗಿಗಳ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಶಾಪ ಹಾಕುತ್ತಿದ್ದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ’ ಎನ್ನುತ್ತಾರೆ ಬುಡ್ನಹಟ್ಟಿಯ ಗ್ರಾಮದ ಸಿ.ಜನಾರ್ದನ.
ನೂರು ಹಾಸಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನು ಪ್ರಾಣಿಗಳಂತೆ ಕೊಠಡಿಯಲ್ಲಿ ತುಂಬಿರುವುದು ಖಂಡನೀಯ. ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿ.ಕೇಶವಯ್ಯ, ವಕೀಲ ಮತ್ತು ಅಧ್ಯಕ್ಷ, ವಾಲ್ಮೀಕಿ ಸೇವಾ ಸಂಸ್ಥೆ, ಚಳ್ಳಕೆರೆ
ಆಸ್ಪತ್ರೆಯಲ್ಲಿ ಹಾಸಿಗೆಯ ಕೊರತೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುತ್ತದೆ. ಡಾ.ಪ್ರೇಮಸುಧಾ,
ತಾಲ್ಲೂಕು ಆರೋಗ್ಯಾಧಿಕಾರಿ