ಲಖನೌ: ವಿಶ್ವದ ಏಳು ಅದ್ಭುತಗಳಲ್ಲಿ ಒಂದೆನಿಸಿರುವ ಆಗ್ರಾದ ತಾಜ್ ಮಹಲ್ ಅನ್ನು ಉತ್ತರ ಪ್ರದೇಶದ ರಾಜ್ಯ ಬಜೆಟ್ನ ‘ಪರಂಪರೆ ಯೋಜನೆ’ಗಳಿಂದ ಹೊರಗಿಡಲಾಗಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಉತ್ತರ ಪ್ರದೇಶ ಸರ್ಕಾರ ಪಾರಂಪರಿಕ ಕಟ್ಟಡಗಳ ವಿಚಾರದಲ್ಲೂ ಧರ್ಮವನ್ನು ಬೆರೆಸುತ್ತಿದೆ. ತಾಜ್ ಮಹಲ್ ಅನ್ನು ಧರ್ಮದೊಂದಿಗೆ ಬೆಸೆಯುವುದು ಸರಿಯಲ್ಲ’ ಎಂದು ಇತಿಹಾಸ ತಜ್ಞರು ಹಾಗೂ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದ 2017–18ನೇ ಸಾಲಿನ ವಾರ್ಷಿಕ ಬಜೆಟ್ನಲ್ಲಿ ‘ನಮ್ಮ ಸಾಂಸ್ಕೃತಿಕ ಪರಂಪರೆ’ (ಹಮಾರಿ ಸಾಂಸ್ಕೃತಿಕ್ ವಿರಾಸರ್) ಎಂಬ ವಿಶೇಷ ವಿಭಾಗವನ್ನು ಮಾಡಲಾಗಿದೆ. ಪರಂಪರೆಯ ಪುನರುತ್ಥಾನಕ್ಕಾಗಿ ಈ ವಿಭಾಗದಲ್ಲಿ ಅನುದಾನ ಮೀಸಲಿಡುವುದು ಸರ್ಕಾರದ ಉದ್ದೇಶ. ಆದರೆ, ಈ ಪರಂಪರೆ ಯೋಜನೆಗಳಲ್ಲಿ ತಾಜ್ ಮಹಲ್ನ ಉಲ್ಲೇಖವೇ ಇಲ್ಲ.
ಆದರೆ, ರಾಜ್ಯ ಬಜೆಟ್ನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯಾ, ಮಥುರಾ ಮತ್ತು ಚಿತ್ರಕೂಟಗಳ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸಲಾಗಿದೆ.
‘ತಾಜ್ ಮಹಲ್ ಒಂದು ಭವ್ಯ ಸ್ಮಾರಕ. ಅದನ್ನು ಧರ್ಮದೊಂದಿಗೆ ತಳುಕು ಹಾಕುವುದು ಸರಿಯಲ್ಲ. ಸರ್ಕಾರ ಯಾವುದೇ ಇರಲಿ, ತಾಜ್ ಮಹಲ್ ಅನ್ನು ಕಡೆಗಣಿಸಬಾರದು’ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸೋಹನ್ ಲಾಲ್ ಯಾದವ್ ಹೇಳಿದ್ದಾರೆ.