ಬಳ್ಳಾರಿ: ‘ರಾಜ್ಯದ ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಸಲುವಾಗಿ ಹಳೇ ವಿದ್ಯಾರ್ಥಿ ಸಂಘಗಳನ್ನು ಕಡ್ಡಾಯವಾಗಿ ರಚಿಸಬೇಕು’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಸಲಹೆ ನೀಡಿದರು.
ನಗರದಲ್ಲಿ ಬುಧವಾರ ಸರ್ಕಾರಿ ಶಾಲೆಗಳ ಬಲವರ್ಧನೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಶಾಲೆಗಳಲ್ಲಿ ಓದಿದ ಬಹುತೇಕರು ಉನ್ನತ ಸ್ಥಾನದಲ್ಲಿದ್ದಾರೆ. ಅಂತಹ ಕನಿಷ್ಠ 150 ಮಂದಿ ಹಳೇ ವಿದ್ಯಾರ್ಥಿಗಳನ್ನು ಒಳಗೊಂಡ ಸಂಘವನ್ನು ರಚಿಸಿದರೆ ಶಾಲೆಯ ಅಭಿವೃದ್ಧಿಗೆ ನೆರವು ದೊರಕುತ್ತದೆ’ ಎಂದರು.
‘ಸಭೆಯಲ್ಲಿರುವ ಬಹುತೇಕರು ಸರ್ಕಾರಿ ಶಾಲೆಗಳಲ್ಲೇ ಓದಿದವರು. ಆದರೆ ನಿಮ್ಮಲ್ಲಿ ಎಷ್ಟು ಮಂದಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೀರಿ’ ಎಂಬ ಅವರ ಪ್ರಶ್ನೆಗೆ ಬಹುತೇಕ ಅಧಿಕಾರಿಗಳ ಮೌನವೇ ಉತ್ತರವಾಗಿತ್ತು.
ಸರ್ಕಾರಿ ಶಾಲೆಗಳಲ್ಲಿರುವ ಸೌಕರ್ಯಗಳ ಕುರಿತು ಸಮರ್ಪಕ ಉತ್ತರ ನೀಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್ ಅವರ ಕಡೆಗೆ ಅಸಮಾಧಾನದ ನೋಟ ಬೀರಿದ ಅಧ್ಯಕ್ಷೆ, ‘ಹಾರಿಕೆಯ ಉತ್ತರ ಕೊಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಜವಾಬ್ದಾರಿಯಿಂದ ವರ್ತಿಸಿರಿ’ ಎಂದೂ ತಾಕೀತು ಮಾಡಿದರು.