ಬೆಂಗಳೂರು: ಆಸ್ತಿ ತೆರಿಗೆಯಿಂದ ವಿನಾಯ್ತಿ ನೀಡುವಂತೆ ಕೋರಿದ್ದ ಶಾಲೆಯ ಮನವಿ ತಿರಸ್ಕರಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರ (ಬಿಬಿಎಂಪಿ) ನಡೆಗೆ ಹೈಕೋರ್ಟ್ ಬುಧವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
‘ಆಯುಕ್ತರು ಜೈಲಿಗೆ ಹೋಗಲು ತಯಾರಾಗಬೇಕು’ ಎಂಬ ಖಡಕ್ ಎಚ್ಚರಿಕೆ ನೀಡಿದೆ.
ಈ ಕುರಿತ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು, ‘ಇಂಥವರೆಲ್ಲಾ ಸೇರಿಕೊಂಡು ಬಿಬಿಎಂಪಿಗೆ ಚಪ್ಪಡಿ ಎಳೆಯಲು ಬಯಸುತ್ತಿರುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆಯುಕ್ತರು ದಾಖಲೆಗಳನ್ನು ಓದದೆ ಕಣ್ಮುಚ್ಚಿಕೊಂಡು ಆದೇಶಗಳಿಗೆ ಸಹಿ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಈ ಬಗ್ಗೆ ವಿವರಣೆ ನೀಡಲು ಗುರುವಾರ (ಜುಲೈ 13) ಬೆಳಿಗ್ಗೆ 10.30ಕ್ಕೆ ಆಯುಕ್ತರೇ ಕೋರ್ಟ್ಗೆ ಖುದ್ದು ಹಾಜರಾಗಬೇಕು’ ಎಂದು ಬಿಬಿಎಂಪಿ ವಕೀಲ ವಿ.ಶ್ರೀನಿಧಿ ಅವರಿಗೆ ತಾಕೀತು ಮಾಡಿದರು.
ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿರುವ ‘ಸಿಸ್ಟರ್ಸ್ ಆಫ್ ಪ್ರೀಷಿಯಸ್ ಬ್ಲಡ್’ ಸಂಸ್ಥೆಯ ಆರಾಧನಾ ಶಾಲೆಗೆ ಆಸ್ತಿ ತೆರಿಗೆ ವಿನಾಯ್ತಿ ನೀಡಲು ಬಿಬಿಎಂಪಿ ನಿರಾಕರಿಸಿತ್ತು. ಶಾಲೆಯ ಪರ ಆರ್.ಎ.ದೇವಾನಂದ ವಾದ ಮಂಡಿಸಿದರು.