ಲಖನೌ ಘಟಕ ಮುಚ್ಚಲಿದೆ ಟಿಸಿಎಸ್: 2000 ಐಟಿ ಉದ್ಯೋಗಿಗಳ ಭವಿಷ್ಯ ಅತಂತ್ರ

ಲಖನೌ: ಮಾಹಿತಿ ತಂತ್ರಜ್ಞಾನ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಉತ್ತರಪ್ರದೇಶದ (ಟಿಸಿಎಸ್) ಲಖನೌನಲ್ಲಿರುವ ಘಟಕವನ್ನು ಮುಚ್ಚಲು ನಿರ್ಧರಿಸಿದ್ದು, ಇದರಿಂದ ಕನಿಷ್ಠ 2,000 ಉದ್ಯೋಗಿಗಳ ಭವಿಷ್ಯ ಇಕ್ಕಟ್ಟಿಗೆ ಸಿಲುಕಲಿದೆ. ಲಖನೌನಲ್ಲಿ ಕಂಪೆನಿ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಎಂಬುದಾಗಿ ತಂಡದ ನಾಯಕರು ತಿಳಿಸಿರುವುದಾಗಿ ಉದ್ಯೋಗಿಗಳು ಹೇಳಿದ್ದಾರೆ.
ವರದಿಗಳ ಪ್ರಕಾರ, ಹೆಚ್ಚಿನೆಲ್ಲ ಯೋಜನೆಗಳನ್ನು ಕಂಪೆನಿಯು ನೊಯ್ಡಾದಲ್ಲಿರುವ ಘಟಕಕ್ಕೆ ವರ್ಗಾಯಿಸಲಿದೆ. ಇದರಿಂದ ತೊಂದರೆಗೀಡಾಗುವ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಮಹಿಳೆಯರು ಎನ್ನಲಾಗಿದೆ.
ಆದರೆ, ಈ ವಿಚಾರವಾಗಿ ಇದುವರೆಗೆ ಟಿಸಿಎಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪೆನಿಯ ಘಟಕ ಮುಚ್ಚುವ ನಿರ್ಧಾರಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೆಲವು ಉದ್ಯೋಗಿಗಳು ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೂ ಪತ್ರ ಬರೆಯಲಾಗಿದೆ. ಟಿಸಿಎಸ್ನ ಲಖನೌ ಘಟಕ ಕಳೆದ 33 ವರ್ಷಗಳಿಂದ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.