ಹನೂರು(ಚಾಮರಾಜನಗರ ಜಿಲ್ಲೆ): ಅಂಚೆ ಮೂಲಕ ಬಂದಿದ್ದ ಆಧಾರ್, ಎಟಿಎಂ ಕಾರ್ಡ್ ಇನ್ನಿತರ ದಾಖಲೆಗಳನ್ನು ಅಂಚೆ ಇಲಾಖೆ ನೌಕರನೊಬ್ಬ ಹೂತಿಟ್ಟಿದ್ದ ಪ್ರಕರಣ ಸಂಬಂಧ ಪೋಸ್ಟ್ ಮನ್ ನಾಗರಾಜು ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.
ಮೌಲ್ಯಯುತ ದಾಖಲೆಗಳನ್ನು ಮಣ್ಣಿನೊಳಗೆ ಹೂತಿಡುವ ಮೂಲಕ ಅಕ್ರಮವೆಸಗಿದ್ದ ಪೋಸ್ಟ್ ಮನ್ ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕೊಳ್ಳೆಗಾಲ ಅಂಚೆ ನಿರೀಕ್ಷಕ ಅಜಯ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಅಂಚೆ ಮೂಲಕ ಬಂದಿದ್ದ ಆಧಾರ್, ಎಟಿಎಂ ಕಾರ್ಡ್ ಇನ್ನಿತರ ದಾಖಲೆಗಳನ್ನು ಅಂಚೆ ಇಲಾಖೆ ನೌಕರ ಹೂತಿಟ್ಟಿದ್ದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿತ್ತು.
ಸಮೀಪದ ಲೊಕ್ಕನಹಳ್ಳಿ ಗ್ರಾಮದಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ಅಂಚೆ ಕಚೇರಿ ಮುಂಭಾಗ ರಸ್ತೆ ಬದಿಯ ನಿವೇಶನವೊಂದರಲ್ಲಿ ಗುಂಡಿ ತೆಗೆದು ಹೂತಿಡಲಾಗಿತ್ತು. ಗ್ರಾಮಸ್ಥರೊಬ್ಬರು ಮನೆ ನಿರ್ಮಿಸಲು ತಳಪಾಯ ತೆಗೆಸುವಾಗ ಹೂತ್ತಿಟ್ಟಿದ್ದ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳು ಯಾವ ಅವಧಿಯಲ್ಲಿ ಬಂದಿದ್ದವು ಹಾಗೂ ಕೃತ್ಯ ಎಸಗಿದ ಸಿಬ್ಬಂದಿ ಯಾರು ಎಂಬುದು ಸದ್ಯ ತಿಳಿದುಬಂದಿರಲಿಲ್ಲ.
ಅಂಚೆ ಇಲಾಖೆಯ ಈ ಕಚೇರಿ ವ್ಯಾಪ್ತಿಗೆ ಲೊಕ್ಕನಹಳ್ಳಿ, ಕೌಳ್ಳಿಹಳ್ಳ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನಕೂಬೆ ಗ್ರಾಮಗಳು ಬರುತ್ತವೆ.
ಪ್ರತಿಭಟನೆ: ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಇಲಾಖೆ ನೌಕರನ ಕೃತ್ಯದಿಂದಾಗಿ ನಾಗರಿಕರಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದ್ದರು.
ಸಮಗ್ರ ಮಾಹಿತಿ ಪಡೆದು, ಕರ್ತವ್ಯಲೋಪ ಎಸಗಿದ ನೌಕರನನ್ನು ಪತ್ತೆ ಹಚ್ಚಿ, ಕ್ರಮ ಜರುಗಿಸಲಾಗುವುದು ಎಂದು ನಂಜನಗೂಡು ಅಂಚೆ ಇಲಾಖೆ ಅಧೀಕ್ಷಕ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದರು.