ಬೆಂಗಳೂರು: ‘ಈ ರಾಜ್ಯ ಸರ್ಕಾರಕ್ಕೆ ಷಂಡ ಪದಕ್ಕಿಂತಲೂ ಕಠಿಣ ಪದ ಬಳಸಬೇಕು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ‘ಷಂಡ ಎಂಬ ಪದಕ್ಕೆ ಉತ್ತರ ಕರ್ನಾಟಕದಲ್ಲಿ ಸಾಂಸ್ಕೃತಿಕ ಹಿನ್ನೆಲೆ ಇದೆ’ ಎಂದೂ ಅವರು ಪ್ರತಿಪಾದಿಸಿದರು.
‘ಕೈಲಾಗದವರನ್ನು ಉದ್ದೇಶಿಸಿ ಮಾತನಾಡುವಾಗ ಇವನಿಗೆ ಗಂಡಸ್ತನ ಇದೆಯೇ ಎಂದು ನಮ್ಮ ಕಡೆ ಕೇಳುತ್ತಾರೆ. ಈ ಸರ್ಕಾರದ ನಡವಳಿಕೆ ನೋಡಿ ಅದೇ ರೀತಿ ಹೇಳಿದ್ದಾರೆ’ ಎಂದು ಅವರು ಹೇಳಿದರು.
ಶ್ವೇತಪತ್ರಕ್ಕೆ ಆಗ್ರಹ: ‘ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ನಾಲ್ಕು ವರ್ಷಗಳಿಂದ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಶೆಟ್ಟರ್ ಆಗ್ರಹಿಸಿದರು.
‘ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ತಾವು ಅಧಿಕಾರಕ್ಕೆ ಬಂದರೆ, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ಈವರೆಗೂ ಯಾರನ್ನೂ ಜೈಲಿಗೆ ಕಳುಹಿಸಿಲ್ಲ’ ಎಂದು ಅವರು ಟೀಕಿಸಿದರು.
‘ಲೋಕಾಯುಕ್ತ ತನಿಖೆ ವ್ಯಾಪ್ತಿಯಲ್ಲಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ವಹಿಸಿರುವುದು ಬೆದರಿಸುವ ತಂತ್ರವಷ್ಟೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ’ ಎಂದು ಶೆಟ್ಟರ್ ಹೇಳಿದರು.
* ಷಂಡ ಪದ ಸಂಸದೀಯ ಪದವೋ ಅಸಂಸದೀಯ ಪದವೋ ಎಂಬ ಬಗ್ಗೆ ಚರ್ಚೆ ನಡೆಯಲಿ