ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ 28 ವರ್ಷದ ಗಣೇಶ್ ಅವರ ಅಂಗಾಂಗ ದಾನದಿಂದ ಐದು ಮಂದಿಗೆ ಜೀವ ನೀಡಲಾಗಿದೆ.
ಜುಲೈ 9ರಂದು ಗಣೇಶ್ ಅವರು ಮಂಡ್ಯದಿಂದ ಮೈಸೂರಿಗೆ ಬೈಕ್ನಲ್ಲಿ ಬರುವಾಗ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರು, ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಗುರುವಾರ ಇಲ್ಲಿನ ವೈದ್ಯರು ಗಣೇಶ್ ಅವರ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ಹೇಳಿದರು. ಈ ಸುದ್ದಿ ಕೇಳಿದ ನಂತರ ಗಣೇಶನ ಪೋಷಕರು ಮಗನ ಮೇದೋಜೀರಕ ಗ್ರಂಥಿ, ಮೂತ್ರಪಿಂಡ, ಹೃದಯ, ಯಕೃತ್ ಹಾಗೂ ಕಣ್ಣುಗಳನ್ನು ದಾನ ಮಾಡುವುದಕ್ಕೆ ಒಪ್ಪಿದರು.
ಬಿಜಿಎಸ್ ಆಸ್ಪತ್ರೆಯಲ್ಲಿ ಯಕೃತ್, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಪಿಂಡ ವೈಫಲ್ಯವಿದ್ದ ರೋಗಿಗಳಿಗೆ ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು.
ಮತ್ತೊಂದು ಮೂತ್ರಪಿಂಡವನ್ನು ರಾಮಯ್ಯ ಆಸ್ಪತ್ರೆಗೆ, ಹೃದಯವನ್ನು ಮಣಿಪಾಲ್ ಆಸ್ಪತ್ರೆ ಹಾಗೂ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಯಿತು. ಈ ಮೂಲಕ ಐವರಿಗೆ ಜೀವದಾನ ಸಿಕ್ಕಿದೆ.