ಗುರುಮಠಕಲ್: ಮುಂಗಾರು ಆರಂಭ ವಾಗಿ ಉತ್ತಮ ಮಳೆ ಸುರಿದಿದ್ದು ಸಮೀಪದ ಗವಿಸಿದ್ದಲಿಂಗೇಶ್ವರ, ದಬ್ ದಬಿ ಜಲಪಾತ, ಬಂಡಲೋಗು ಜಲ ಪಾತ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳು ಹಸಿರುಡುಗೆಯುಟ್ಟ ಮದು ವಣಗಿತ್ತಿಯಂತೆ ಕಂಗೊಳಿಸುತ್ತಿವೆ.
‘ನಾಲ್ಕು–ಐದು ವರ್ಷಗಳಿಂದ ಗವಿ ಸಿದ್ದಲಿಂಗೇಶ್ವರ ದೇವಸ್ಥಾನದ ದರ್ಶನ ಹಾಗೂ ಜಲಪಾತದ ವೀಕ್ಷಣೆಗೆ ನಾವು ಬರುತ್ತಿದ್ದೇವೆ. ಈ ವರ್ಷ ಅರಣ್ಯ ವೀಕ್ಷಣೆ ಆಹ್ಲಾದಕರ ಅನುಭವ ನೀಡುತ್ತಿದೆ.
ಇದರ ಜೊತೆಗೆ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಶೌಚಾಲಯ ವ್ಯವಸ್ಥೆ ಸೇರಿದಂತೆ ರಸ್ತೆ ದುರಸ್ತಿ ಹಾಗೂ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರಿಗೆ ಅನುಕೂಲ’ ಎಂದು ತೆಲಂಗಾಣದ ನಾರಾಯಣ ಪೇಟದ ಪ್ರವಾಸಿಗರಾದ ಭೂಪಾಲ ತಿಳಿಸಿದರು. ಮಾಣಿಕಪ್ಪ ಹಾಗೂ ನರಸಿಂಹುಲು ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.
‘ದಬ್ ದಬಿ ಜಲಪಾತವಂತೂ ಸುತ್ತಲೂ ಬೆಟ್ಟಗಳ ನಡುವೆ ರಮಣೀಯ ವಾಗಿದ್ದು, ಎತ್ತ ನೋಡಿದರೂ ಹಸಿರು ಬೆಟ್ಟಗಳೇ ಕಾಣುತ್ತವೆ. ಎರಡು ವರ್ಷಗಳಿಗಿಂತ ಈ ಸಲ ಪ್ರದೇಶವು ಹೆಚ್ಚು ಹಸಿರುಮಯವಾಗಿದೆ. ಇಲ್ಲಿ ಸುತ್ತಾಡಿದರೆ, ಕಾಲ ಕಳೆದಿದ್ದೇ ಗೊತ್ತಾಗುವುದಿಲ್ಲ. ಹಸಿರು ಆವರಣ ಮನಸ್ಸಿಗೆ ಖುಷಿ ಕೊಡುತ್ತದೆ’ ಸೇಡಂ ತಾಲೂಕಿನ ಪ್ರವಾಸಿಗ ವಿಶ್ವನಾಥರೆಡ್ಡಿ ತಿಳಿಸಿದರು.
‘ಗವಿ ಸಿದ್ದಲಿಂಗೇಶ್ವರ ದೇವಸ್ಥಾನದ ಸುತ್ತಲಿನ ಅರಣ್ಯ ಪ್ರದೇಶವು ಒತ್ತುವರಿ ಯಗಿದ್ದು, ಇದರ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕಿದೆ. ಸಸ್ಯ ಸಂಪತ್ತು ವೃದ್ಧಿಸಬೇಕಿದೆ ಎಂದು ಪ್ರವಾಸಿಗರು ತಿಳಿಸಿದರು.
ಯಾದಗಿರಿ ಜಿಲ್ಲೆಯ ಹಸಿರು ಪ್ರದೇಶವನ್ನು ವಿಸ್ತರಿಸಬೇಕು ಎಂಬುದು ಪರಿಸರ ಪ್ರೇಮಿಗಳಾದ ನಾರಾಯಣ ಹಾಗೂ ವಿಜಯಪುರದ ಮಹೇಶ್ವರಿ ಅವರ ಅಭಿಪ್ರಾಯ.
‘ಒತ್ತುವರಿಯಾಗಿದ್ದ ಸುಮಾರು 50 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಸಸಿಗಳನ್ನು ನೆಡಲಾಗಿದೆ.
ಉಳಿದ ಪ್ರದೇಶವನ್ನೂ ಸ್ವಾದೀನಪಡಿಸಿ ಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಜನರೂ ಸಹ ನಮ್ಮೊಂದಿಗೆ ಸಹಕರಿಸಿದರೆ ಉತ್ತಮ ಸಸ್ಯ ಸಂಪತ್ತು ಇಲ್ಲಿ ಬೆಳೆಸಬಹುದು’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಭೀಮಾಶಂಕರ ತಿಳಿಸಿದರು. ಬೆಟ್ಟಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮತ್ತು ಹಸಿರು ಪ್ರದೇಶದಲ್ಲಿ ಸುತ್ತಾಡಲು ಹೆಚ್ಚಿನ ಜನರು ಇಷ್ಟಪಡುತ್ತಿದ್ದು, ಪ್ರವಾಸಿಗರ ಸಂಖ್ಯೆ ವೃದ್ಧಿಸುತ್ತಿರುವುದು ವಿಶೇಷ.
* *
ಅರಣ್ಯಪ್ರದೇಶ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಪ್ರದೇಶವನ್ನು ಇಲಾಖೆ ವ್ಯಾಪ್ತಿಗೆ ಪಡೆಯಲಾಗಿದೆ
ಭೀಮಾಶಂಕರ, ಅರಣ್ಯ ರಕ್ಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.