ಹೊಸಪೇಟೆ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಕಮಲಾಪುರ ಕೆರೆ ದಂಡೆಯ ಮೇಲೆ ಶನಿವಾರ ರಸ್ತೆ ವಿಸ್ತರಣೆ ಸಂದರ್ಭದಲ್ಲಿ, ಶಿಲ್ಪಕಲೆ ಕೆತ್ತನೆ ಹೊಂದಿರುವ ಪುರಾತನ ಕಲ್ಲು ಕಂಬಗಳು ಪತ್ತೆಯಾಗಿವೆ.
ಕಂಬಗಳ ಮೇಲೆ ಸಾಲು ಆನೆಗಳ ಕೆತ್ತನೆ ಇದ್ದು, ಇವು ವಿಜಯನಗರ ಸಾಮ್ರಾಜ್ಯದ ಕಾಲದ್ದು ಇರಬಹುದು ಎಂದು ಅಂದಾಜಿಸಲಾಗಿದೆ.
‘ಕಮಲಾಪುರ ಕೆರೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಹಜವಾಗಿಯೇ ವಿಜಯನಗರ ಸಾಮ್ರಾಜ್ಯ ಕಾಲದ ಅನೇಕ ಕುರುಹುಗಳು ಅಲ್ಲಲ್ಲಿ ಇವೆ. ಈಗ ಸಿಕ್ಕಿರುವ ಕಲ್ಲುಗಳು ಕೂಡ ಆ ಕಾಲದ್ದೇ ಇರಬಹುದು’ ಎನ್ನುತ್ತಾರೆ ಜನಸಂಗ್ರಾಮ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸದಸ್ಯ ಶಿವಕುಮಾರ ಮಾಳಗಿ.
‘ಸ್ಥಳಕ್ಕೆ ವಾಸ್ತು ತಜ್ಞರನ್ನು ಕರೆಸಬೇಕು. ಎಲ್ಲವನ್ನೂ ಪರಿಶೀಲಿಸಿದ ನಂತರ ರಸ್ತೆ ವಿಸ್ತರಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.