ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಗೋಡೆಗಳ ಮೇಲೆ ವರ್ಲಿ ಚಿತ್ತಾರ

Last Updated 16 ಜುಲೈ 2017, 6:25 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ಜನ ಜೀವನದ ನಿಜವಾದ ಚಿತ್ರಣಗಳಿಗೆ ಜೀವಂತ ರೂಪ ನೀಡುವ ಕಲೆಗಳಲ್ಲಿ ವರ್ಲಿ ಕಲಾ ಪ್ರಕಾರ ಪ್ರಮುಖವಾದುದು. ಅದು ಮನಸ್ಸಿಗೆ ಹೆಚ್ಚು ಖುಷಿ ನೀಡುವ ಕಲೆ. ಇಂತಹ ಕಲೆಯನ್ನು ಮನೆಗಳಲ್ಲಿ ಮಾತ್ರವಲ್ಲದೆ ಶಾಲೆಗಳ ಗೋಡೆಗಳ ಮೇಲೆ ರಚಿಸುವ ಪ್ರಯತ್ನ ಇಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 7ರ ಸಾದಲಿ ಮಾರ್ಗದ ರಸ್ತೆಗೆ ಹೊಂದಿಕೊಂಡಂತಿರುವ ಹಳೇ ಪೆರೇಸಂದ್ರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಾ ಸೈ ಎನಿಸಿಕೊಂಡಿದ್ದಾರೆ.

ಶಾಲೆಗೆ ಹೊಸ ರೂಪು ನೀಡಬೇಕು, ಶಾಲೆಯನ್ನು ಇನ್ನಷ್ಟು ಸುಂದರ, ಸ್ವಚ್ಛವಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಶಾಲೆಯ ಮುಖ್ಯ ಶಿಕ್ಷಕ ನರಸಿಂಹರೆಡ್ಡಿ ಸಹಕಾರದೊಂದಿಗೆ ಮಕ್ಕಳು ಶಾಲೆಯ ಗೋಡೆಯಲ್ಲಿ ವರ್ಲಿ ಚಿತ್ರಗಳನ್ನು ಬಿಡಿಸಿದರು. ಶಾಲೆಯ ಸುತ್ತಮುತ್ತಲೂ ರಂಗು ರಂಗಿನ ಚಿತ್ತಾರಗಳು ಮೂಡಿಬಂದವು.

ವರ್ಲಿ ಚಿತ್ರ ಬಿಡಿಸುವ ಕಾರ್ಯದಲ್ಲಿ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗವಹಿಸಿದ್ದು, ಇದೇ ಶಾಲೆಯ ಚಿತ್ರಕಲಾ ಶಿಕ್ಷಕ ಅರುಣ್ ವಿದ್ಯಾರ್ಥಿಗಳಿಗೆ ಚಿತ್ರ ರಚನೆಗೆ ಮಾರ್ಗದರ್ಶನ ನೀಡಿದರು. ಶಿಕ್ಷಣದಲ್ಲಿ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಬರಲಿ ಎನ್ನುವ ಉದ್ದೇಶದಿಂದ ಹಿಂದಿ, ಕನ್ನಡ, ಇಂಗ್ಲಿಷ್‌ ಪಠ್ಯ ಪುಸ್ತಕಗಳಲ್ಲಿನ ಇತರೆ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿರಿಸಿ ಚಿತ್ರ ರಚನೆಗೆ ಸಹಕಾರ ನೀಡುತ್ತಿದ್ದೇವೆ ಎನ್ನುತ್ತಾರೆ ಅರುಣ್.

ಕೃಷಿ, ಕುಂಬಾರಿಕೆ, ಮೀನುಗಾರಿಕೆ, ಭತ್ತ ಕುಟ್ಟುವಿಕೆ, ಹೈನುಗಾರಿಕೆ, ಮರಗಳು, ಪ್ರಾಣಿಗಳು, ಪಕ್ಷಿಗಳು, ಯಕ್ಷ ಗಾನ, ಜನಪದ ನೃತ್ಯ– ಹೀಗೆ ಹತ್ತು ಹಲವು ಬಗೆಯ ಅಂಶಗಳನ್ನು ಚಿತ್ರಗಳಲ್ಲಿ ಮೂಡಿಸಿ ಗೋಡೆಗಳಿಗೆ ಒಂದು ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಜನಸಾಮಾನ್ಯರು, ಸಾರ್ವಜನಿಕರು, ಮಕ್ಕಳಿಗೆ ನಿತ್ಯ ಜೀವನದ ಬಗ್ಗೆ ಅರಿವು ಇರಲಿ ಎನ್ನುವ ಕಾರಣಕ್ಕೆ ವರ್ಲಿಯಲ್ಲಿ ಗ್ರಾಮೀಣ ಭಾಗದ ನೈಸರ್ಗಿಕ ಅಂಶಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಮರಳಿ ಬಾ ಶಾಲೆಗೆ ಎನ್ನುವ ಧ್ಯೇಯ ವಾಕ್ಯದ ಪಾಲನೆಗಾಗಿ ಇಂತಹ ವಿಶೇಷ ಕಲಾಕೃತಿಗಳನ್ನು ನೋಡಿದ ಮಕ್ಕಳಿಗೆ ಮರಳಿ ಶಾಲೆಗೆ ಸೇರಬೇಕು ಎನ್ನುವ ಹೊಸ ಆಸೆ ಅವರ ಮನಸ್ಸಲ್ಲಿ ಮೂಡಲಿ ಎನ್ನುವ ಉದ್ದೇಶದಿಂದ ಇಂತಹ ಅಂಶಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಒಂದು ಮಾದರಿ ಶಾಲೆಯಾಗಿ ರೂಪುಗೊಳ್ಳಬೇಕು ಎನ್ನುವ ಉದ್ದೇಶ ಹೊಂದಿರುವ ಹಳೇ ಪೆರೇಸಂದ್ರ ಸರ್ಕಾರಿ ಪ್ರೌಢಶಾಲೆಯ ಗೋಡೆಗಳ ಮೇಲೆ ರಚನೆಯಾಗಿರುವ ವರ್ಲಿ ಕಲಾಕೃತಿ ಎಂತಹವರನ್ನೂ ಮಂತ್ರಮುಗ್ಧಗೊಳಿಸಬಲ್ಲವು.

ಮಹಾರಾಷ್ಟ್ರದ ವರ್ಲಿ ಎಂಬ ಹಳ್ಳಿಯಲ್ಲಿ ಇಂತಹ ಕಲೆ ಹುಟ್ಟಿಕೊಂಡ ಕಾರಣಕ್ಕೆ ಈ ಚಿತ್ರಕಲೆ ವರ್ಲಿ ಎನ್ನುವ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬಡವರು ತಮ್ಮ ಗುಡಿಸಲು ಮನೆಯ ಗೋಡೆಗಳು ಅಂದವಾಗಿ, ಒಪ್ಪ ಓರಣವಾಗಿ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಮನೆಗಳ ಗೋಡೆಗಳಿಗೆ ಕೆಂಪು ಕಾವಿ ಮಣ್ಣಿನ ಬಣ್ಣ ಬಳಿದು ಅದರ ಮೇಲೆ ಬಿಳಿ ಬಣ್ಣದ ಸುಣ್ಣಗಳಿಂದ ರೇಖೆಗಳ ಮುಖಾಂತರ ಚಿತ್ರ ಬಿಡಿಸುತ್ತಿದ್ದರು. ಇದು ಗುಡಿಸಿಲಿನ ಅಂದವನ್ನು ಇಮ್ಮಡಿಗೊಳಿಸುತ್ತಿದ್ದವು.

ಖ್ಯವಾಗಿ ಅವರು ಗೋಡೆಗಳ ಮೇಲೆ ತಮ್ಮ ಜನಾಂಗ, ಜಾತಿ ಸಮಸ್ಯೆ, ಸಾಧನೆ, ವೈಶಿಷ್ಟ್ಯಗಳನ್ನು ಇಂತಹ ಚಿತ್ರಗಳ ಮೂಲಕ ಬಿಡಿಸುತ್ತಿದ್ದರು. ಕ್ರಮೇಣ ಇದೊಂದು ಚಿತ್ರಕಲೆಯ ಭಾಗವಾಗಿ ಇಡೀ ದೇಶದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ.

ವರ್ಲಿ ಆರ್ಟ್ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ
ಈ ಚಿತ್ರಕಲೆಯು ನಮ್ಮ ಶಾಲೆಗೆ ಒಂದು ರೀತಿಯ ಆಕರ್ಷಣೆಯಾಗಿದೆ. ಈ ವರ್ಲಿ ಆರ್ಟ್ ಬಗ್ಗೆ ಈ ಸುತ್ತಮುತ್ತಲ ಗ್ರಾಮಗಳ ಜನರು  ಹಾಗೂ ನಮಗೂ ಗೊತ್ತೇ ಇರಲಿಲ್ಲ. ಈ ಚಿತ್ರ ಕಲೆಯಿಂದ ನಮ್ಮ ಸುತ್ತಮುತ್ತಲಿನ ಶಾಲೆಗಳಿಗೂ ಅಳವಡಿಸಿಕೊಳ್ಳಲಿ. ಪಾಠದ ಜೊತೆಗೆ ಚಿತ್ರ ಕಲೆಯನ್ನೂ ಕಲಿಯಲಿ.
ಯಾಸ್ಮಿನ್, 10ನೇ ತರಗತಿ, ವಿದ್ಯಾರ್ಥಿ, ಸರ್ಕಾರಿ ಪ್ರೌಢಶಾಲೆ, ಹಳೇ ಪರೇಸಂದ್ರ.

ನಾವು ತುಂಬಾ ಅದೃಷ್ಟವಂತರು
ನಾವು ತುಂಬಾ ಅದೃಷ್ಟವಂತರು ಎಂದರೆ ತಪ್ಪಾಗಲಾರದು. ಚಿತ್ರಕಲಾ ಶಿಕ್ಷಕರ ಶಿಕ್ಷರ ಸಹಕಾರದಿಂದ ನಾವು ಚಿತ್ರಕಲೆಯನ್ನು ಕಲಿತೆವು. ನಾವೇ ನಮ್ಮ ಕೈಯಾರೆ ಶಾಲೆಯ ಗೋಡೆಗಳ ಮೇಲೆ ವಿವಿಧ ರೀತಿಯ ವರ್ಣರಂಚಿತ ವರ್ಲಿ ಆರ್ಟ್ ಕಲಾಕೃತಿಗಳನ್ನು ಬಿಡಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಖಾಸಗಿ ಶಾಲೆಗಳ ಆಕರ್ಷಣೆಗೆ ಶಾಲೆಯ ಮುಖ್ಯಸ್ಥರು ಹಣ ನೀಡಿ ಬೇರೆಯವರ ಖಾಸಗಿಯವರ ಕೈಯಲ್ಲಿ ಚಿತ್ರಗಳನ್ನು ಬರೆಸುತ್ತಾರೆ.
ನವೀನ್, 10ನೇ ತರಗತಿ, ವಿದ್ಯಾರ್ಥಿ, ಸರ್ಕಾರಿ ಪ್ರೌಢಶಾಲೆ, ಹಳೇ ಪರೇಸಂದ್ರ

* * 

ಇದೊಂದು ಬಹಳ ಸುಲಭವಾದ ಚಿತ್ರಕಲೆ. ವಿದ್ಯಾರ್ಥಿಗಳಿಗೆ ಕಲೆಯ ಒಲವು ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಇಂತಹ ಪ್ರಯೋಗ ಕೈಗೊಂಡಿದ್ದೇವೆ.
-ಅರುಣ್, ಚಿತ್ರಕಲಾ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಹಳೇ ಪರೇಸಂದ್ರ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT