ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಸ್ಥಳೀಯ ಯುವಕರನ್ನು ಸೆಳೆಯುತ್ತಿದ್ದ ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಸೇರಿದಂತೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಏಳು ಮಂದಿ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಶಸ್ತ್ರಾಸ್ತ್ರ ತರಬೇತಿ ಪಡೆಯಲು ಮತ್ತು ವಿವಿಧೆಡೆ ಕೈಗೊಳ್ಳುವ ದಾಳಿಯಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಪ್ರಚೋದಿಸುವ ಕಾರ್ಯದಲ್ಲಿ ಈ ಆರೋಪಿಗಳು ತೊಡಗಿದ್ದರು.
ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ದೊಡ್ಡ ಹಿನ್ನಡೆ ಯಾಗಲಿದೆ ಎನ್ನಲಾಗಿದೆ. ಬಂಧಿತ ಆರೋಪಿಗಳಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಖಾಸಗಿ ಶಾಲೆಯ ಶಿಕ್ಷಕ ಸೇರಿದ್ದಾರೆ.
‘ಯುವಕರನ್ನು ಸಂಘಟನೆಯತ್ತ ಸೆಳೆದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಿಬಿರಗಳಲ್ಲಿ ತರಬೇತಿ ಪಡೆಯಲು ಅಧಿಕೃತ ವೀಸಾ ಮೂಲಕವೇ ಪಾಕಿಸ್ತಾನಕ್ಕೆ ಕಳುಹಿಸಲು ಈ ಆರೋಪಿಗಳು ಯೋಜನೆ ರೂಪಿಸಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ.
ಹಿಬ್ಜುಲ್ ಕಮಾಂಡರ್ ಪರ್ವೇಜ್ ವಾನಿ ಅಲಿಯಾಸ್ ಮುಬಷಿರ್ ಈ ಎಲ್ಲ ಯೋಜನೆಯ ನೇತೃತ್ವ ವಹಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಂಧಿತರಲ್ಲಿ ಒಬ್ಬನಾಗಿರುವ ಅಬ್ದುಲ್ ರಶೀದ್ ಭಟ್ ಮೇ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ತರಬೇತಿ ಪಡೆದಿದ್ದ ಎಂದು ಅವರು ತಿಳಿಸಿದ್ದಾರೆ.