ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಜಾರು, ನೆಕ್ಕರೆ ರಸ್ತೆಯು 25 ವರ್ಷಗಳಿಂದ ಹದಗೆಟ್ಟಿದ್ದು, ಇದರ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳದೆ ಬೇಸತ್ತ ಗ್ರಾಮಸ್ಥರೇ ಭಾನುವಾರ ಶ್ರಮದಾನದ ನಡೆಸಿ ಪ್ರತಿಭಟನೆ ನಡೆಸಿದರು.
ವಾರ್ಡ್ ಸದಸ್ಯ ಕೇಶವ ಪೂಜಾರಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಗ್ರಾಮಸ್ಥರು ಶ್ರಮದಾನ ನಡೆಸಿದರು. ನಂತರ ಮಾತನಾಡಿ ‘ಬಂಜಾರು, ನೆಕ್ಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಅದರಲ್ಲಿ 60ಕ್ಕೂ ಅಧಿಕ ದಲಿತ ಕುಟುಂಬಗಳಿವೆ.
ಎರಡು ತಿಂಗಳ ಹಿಂದೆ ಈ ರಸ್ತೆಗೆ ₹25 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಿಸಲು ಜಲ್ಲಿಯನ್ನು ರಾಶಿ ಹಾಕಲಾಗಿತ್ತು. ಆದರೆ ಈ ಭಾಗದ ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಕಾಮಗಾರಿಯನ್ನು ಬೇರೆಡೆಗೆ ವರ್ಗಾಯಿಸಿ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.
ಆಟೊ ಚಾಲಕ ಜೆರಾಲ್ಡ್ ವಾಸ್ ಮಾತನಾಡಿ, ‘ಇಲ್ಲಿನ ಜನರು ತಮ್ಮ ಮನೆಗಳಿಗೆ ತೆರಳಲು ಹೆಚ್ಚಾಗಿ ಆಟೊವನ್ನು ಅವಲಂಬಿಸಿದ್ದು, ಬಾಡಿಗೆ ಹಣ ರಿಕ್ಷಾ ದುರಸ್ತಿಗೆ ಸಾಕಾಗುವುದಿಲ್ಲ. ನಾವು ಗಾಡಿ ಓಡಿಸದಿದ್ದಲ್ಲಿ ಜನರು ತೊಂದರೆ ಅನುಭವಿಸುತ್ತಾರೆ’ ಎಂದರು.
ರಾಜ್ ಕಾಮತ್, ರವೀಂದ್ರ ಭಟ್, ಆಶಾಲತಾ ಶೆಟ್ಟಿ, ಫಿಲಿಪ್ ಡಿಸೋಜ, ರೋನಿ ಸಹಿತ ಅನೇಕರು ಪಕ್ಷ, ಧರ್ಮ ಮರೆತು ಕೆಂಪು ಕಲ್ಲುಗಳನ್ನು ಜೆಸಿಬಿ ಮುಖಾಂತರ ಬಳಸಿ ರಸ್ತೆ ಹೊಂಡಗಳನ್ನು ಮುಚ್ಚಿ ಸಾಮಾಜಿಕ ಕಾಳಜಿ ತೋರಿಸಿದರು.