ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾಗಿ ಕಾರಾಗೃಹಗಳ ಇಲಾಖೆ ಡಿಐಜಿ ರೂಪಾ ಅವರನ್ನು ನೇಮಿಸಲಾಗಿದೆ. ಡಿ.ರೂಪಾ, ಡಿಜಿಪಿ ಎಂ.ಎನ್.ರೆಡ್ಡಿ ಸೇರಿದಂತೆ ಒಟ್ಟು ಐದು ಐಪಿಎಸ್ ಅಧಿಕಾರಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಾರಾಗೃಹಗಳ ಇಲಾಖೆಯ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್ ಸ್ಥಾನಕ್ಕೆ ಎಸಿಬಿಯ ಎಡಿಜಿಪಿ ಆಗಿರುವ ಎನ್.ಎಸ್.ಮೇಘರಿಖ್ ಅವರನ್ನು ನೇಮಿಸಲಾಗಿದ್ದು, ಸತ್ಯನಾರಾಯಣ ಅವರನ್ನು ಯಾವ ಸ್ಥಾನಕ್ಕೆ ವರ್ಗಾಯಿಸಲಾಗಿದೆ ಎಂಬುದನ್ನು ಆದೇಶದಲ್ಲಿ ನಮೂದಿಸಿಲ್ಲ.
ಎಸಿಬಿ ಡಿಜಿಪಿಯಾಗಿ ಗುಪ್ತಚರ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಡಾ.ಎ.ಎಸ್.ಎನ್.ಮೂರ್ತಿ ಅವರನ್ನು ಅರಣ್ಯ ಘಟಕದ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಎಂ.ಎನ್.ರೆಡ್ಡಿ ಅವರ ಸ್ಥಾನಕ್ಕೆ ಗುಪ್ತಚರ ಇಲಾಖೆ ಐಜಿಪಿ ಅಮ್ರಿತ್ ಪೌಲ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.