ಬೆಂಗಳೂರು: ವಿಧಾನ ಪರಿಷತ್ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ (ಪಿ.ಎ) ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
‘ಪ್ರಕರಣದಲ್ಲಿ ಸಂತೋಷ್ ಭಾಗಿಯಾಗಿರುವ ಅನುಮಾನವಿದೆ. ಅವರ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಅವರಿಗಾಗಿ ಹುಡುಕಿಕೊಂಡು ಯಡಿಯೂರಪ್ಪ ಅವರ ಮನೆಗೆ ಹೋಗಿ ಶೋಧ ನಡೆಸಿದ್ದೆವು. ಆದರೆ, ಸಂತೋಷ್ ಸುಳಿವು ಸಿಕ್ಕಿರಲಿಲ್ಲ’.
‘ತಲೆಮರೆಸಿಕೊಂಡಿರುವ ಅವರು ಭಾನುವಾರ (ಜುಲೈ 16) ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಇದ್ದಾರೆ ಎಂಬ ಮಾಹಿತಿ ಬಂದಿತ್ತು. ಅದರನ್ವಯ ನೋಟಿಸ್ ಸಹಿತ ತಂಡವು ಅಲ್ಲಿಗೆ ಹೋಗಿತ್ತು. ಅಲ್ಲೂ ಅವರು ಇರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ಅವರ ತಂದೆಗೆ ನೋಟಿಸ್ ನೀಡಿದ್ದರು. ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದರು. ಬಳಿಕ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದಾರೆ’ ಎಂದು ವಿವರಿಸಿದರು.
‘ಸೋಮವಾರ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಸಂತೋಷ್ ಬರಬೇಕಿತ್ತು. ಆದರೆ, ಅವರು ಹಾಜರಾಗಿಲ್ಲ. ಅವರಿಗಾಗಿ ವಿಶೇಷ ತಂಡವೂ ಹುಡುಕಾಟ ನಡೆಸುತ್ತಿದೆ’ ಎಂದರು.
‘ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಾತ್ರವಿರುವ ಅನುಮಾನವೂ ಇದೆ. ಅವರನ್ನು ಸಹ ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ತಿಳಿಸಿದರು.