ಶಿರ್ವ( ಉಡುಪಿ ಜಿಲ್ಲೆ): ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆಯ ಪಾಂಬೂರು ಸಮೀಪ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದ ಯಜಮಾನ ಶಂಕರ ಆಚಾರ್ಯ ಸಮೀಪದ ಸಹಕಾರಿ ಬ್ಯಾಂಕೊಂದರಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ₹65 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಶಂಕರ ಆಚಾರ್ಯ ಅವರಿಗೆ ನಕಲಿ ಚಿನ್ನಕ್ಕೆ ಸಾಲ ನೀಡಿರುವ ಆರೋಪದಡಿ ಬ್ಯಾಂಕಿನ ಸರಾಫ ಉಮೇಶ ಆಚಾರ್ಯ ಮತ್ತು ಶಾಖಾ ವ್ಯವಸ್ಥಾಪಕ ಉಮೇಶ ಅಮೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಸೋಮವಾರ ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ಗುರುವಾರ ಮುಂಜಾನೆ ಒಂದೇ ಕುಟುಂಬದ ನಾಲ್ವರು ವಿಷ ಪದಾರ್ಥ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ‘ಶಂಕರ ಆಚಾರ್ಯ ನಕಲಿ ಚಿನ್ನ ಅಡವಿಟ್ಟು ಇನ್ನಂಜೆ ಸಿ.ಎ. ಬ್ಯಾಂಕಿನ ಪಡುಬೆಳ್ಳೆ ಶಾಖೆಯಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ’ ಎಂದು ಬ್ಯಾಂಕ್ ಆಡಳಿತ ಮಂಡಳಿ ಶಿರ್ವ ಠಾಣೆಗೆ ದೂರು ನೀಡಿದ್ದರು.