ಬೆಂಗಳೂರು: ಅಖಿಲ ಭಾರತ ಭಾವಸಾರ ಕ್ಷತ್ರಿಯ ಸೇವಾ ಸಮಿತಿ ವತಿಯಿಂದ ಪೀಣ್ಯ ದಾಸರಹಳ್ಳಿಯ ರವೀಂದ್ರನಗರದಲ್ಲಿ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಎಸ್.ಮುನಿರಾಜು ಮಾತನಾಡಿ, ‘ಭಾವಸಾರ ಕ್ಷತ್ರಿಯ ಸಮಾಜದವರು ವೃತ್ತಿಯಲ್ಲಿ ದರ್ಜಿಗಳಾದರೂ ಇಂದು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದರು.
‘ನಾವೆಲ್ಲ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸುಂದರವಾಗಿ ಕಾಣಲು ದರ್ಜಿಗಳು ಕಾರಣ’ ಎಂದು ಹೇಳಿದರು.
ಸಮಿತಿಯ ಖಜಾಂಚಿ ವಿಠ್ಠಲರಾವ್, ‘ರಾಜ್ಯದಲ್ಲಿ ಸಮಿತಿಯ 450 ಶಾಖೆಗಳಿವೆ. ನಗರದಲ್ಲಿ 25 ಸಾವಿರ ಮಂದಿ ಭಾವಸಾರ ಕ್ಷಿತ್ರಿಯರಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಸಮಿತಿ ಶ್ರಮಿಸುತ್ತಿದೆ’ ಎಂದರು.
‘ನಮ್ಮ ಜನಾಂಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈವರೆಗೆ ಸಮುದಾಯದ ಒಬ್ಬ ವ್ಯಕ್ತಿಯೂ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.