ಕಾರವಾರ: ‘ಪಾರಂಪರಿಕ ಅರಣ್ಯ ವಾಸಿ ಗಳಾಗಿರುವ ಸಿದ್ದಿ ಸಮುದಾಯದ ಜನ ರಿಗೆ ಅರಣ್ಯ ಹಕ್ಕು ಕಾಯ್ದೆ–2006 ಅಡಿ ಪಟ್ಟಾ ನೀಡಬೇಕು ಹಾಗೂ ತಿರಸ್ಕರಿಸಿ ರುವ ಸುಮಾರು 300 ಅರ್ಜಿಗಳನ್ನು ಪುನರ್ಪರಿಶೀಲಿಸಿ ಎಲ್ಲರಿಗೂ ಭೂಮಿ ಯನ್ನು ಮಾನ್ಯ ಮಾಡಬೇಕು’ ಎಂದು ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ನೇತೃತ್ವದಲ್ಲಿ ನೂರಾರು ಸಿದ್ದಿ ಜನರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡ, ಶಿರಸಿ, ಅಂಕೋಲಾ, ಕಾರವಾರ ಹಾಗೂ ಜೋಯಿಡಾ ತಾಲ್ಲೂಕುಗಳಲ್ಲಿ ಹಲವಾರು ದಶಕ ಗಳಿಂದ ನೆಲೆಸಿರುವ ಸಿದ್ದಿ ಸಮುದಾಯದ ಜನರು ಈವರೆಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.
ಗಿರಿಜನರಿಗೆ ಅಭಿವೃದ್ಧಿಗಾಗಿ ಕ್ರೋಡೀಕರಿಸಿದ ಅನುದಾನ ಸಿದ್ದಿ ಜನರಿಗೆ ನೇರವಾಗಿ ತಲುಪ ಬೇಕು. ಆಗ ಅನ್ಯರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ ಆರ್ಥಿಕ, ಸಾಮಾ ಜಿಕ ಹಾಗೂ ಶೈಕ್ಷಣಿಕವಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ವೇದಿಕೆ ಅಧ್ಯಕ್ಷ ದಿಯೋಗ ಬಿ. ಸಿದ್ದಿ ಹೇಳಿದರು.
‘ಕೆಲ ಶ್ರೀಮಂತ ವರ್ಗದವರು ವಂಚಿಸಿ ನಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಕಬಳಿಸಿದ್ದು, ನ್ಯಾಯಯುತವಾಗಿ ಪರಿಶೀಲಿಸಿ ಅದನ್ನು ಮರುಕಳಿಸುವಂತೆ ಮಾಡಬೇಕು. ಸಮುದಾಯದ ಯುವಕ, ಯುವತಿಯರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಲ್ಲಿ ನೇರ ನೇಮಕಾತಿ ಮಾಡಿ ಕೊಳ್ಳಬೇಕು.
ಸಮಾಜ ಕಲ್ಯಾಣ ಇಲಾಖೆ ಸಚಿವರು ಘೋಷಿಸಿದ ₹ 52 ಕೋಟಿ ವಿಶೇಷ ಪ್ಯಾಕೇಜ್ ಹಣದಲ್ಲಿ ಕೆಲ ಕಾಮಗಾರಿಗಳು ಆಗಿದ್ದು, ಇನ್ನು ಕೆಲವು ಆಗಿಲ್ಲ. ಉಳಿಕೆ ಹಣವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆಗೊಳಿಸಿ ಮನೆ, ಕೊಳವೆಬಾವಿ, ಸ್ವ ಸಹಾಯ ಸಂಘಗಳ ಸಭಾಭವನ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ಮಾಡಿ ಕೊಡಬೇಕು’ ಎಂದು ಆಗ್ರಹಿಸಿದರು.
‘ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆ ಗಳನ್ನು ಜಾರಿಗೊಳಿಸಬೇಕು. ಯುವಕ–ಯುವಕರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಕೌಶಲ ತರಬೇತಿ ನೀಡ ಬೇಕು. ಸರ್ಕಾರದ ಹಲವಾರು ಸಮಿತಿಗಳಿಗೆ ನಮ್ಮ ಜನರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
ಮನವಿ ಸಲ್ಲಿಕೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾ ಡಿದ ಅವರು, ‘ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು. ವೇದಿಕೆಯ ನಜೀರ್ ಅಹಮ್ಮದ್ ಸಿದ್ದಿ, ಇಮಾಮ ಹುಸೇನ್ ಸಿದ್ದಿ, ಸಿಮಾಂವ ಸಿದ್ದಿ, ಇಮಾಮ್ ಕಕ್ಕೇರಿ ಸಿದ್ದಿ, ಸಂತೋಷ ಸಿದ್ದಿ, ನನ್ನೇಸಾಬ್ ಸಿದ್ದಿ, ಅಂತೋನ ಸಿದ್ದಿ, ಸಂಜಯ ಸಿದ್ದಿ, ಸಲೀಂ ಸಿದ್ದಿ ಹಾಜರಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳಿಂದ ದೌರ್ಜನ್ಯ: ‘ಅತಿಕ್ರಮಣ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಿದ್ದಿ ಸಮುದಾಯದ ಅನೇಕ ಮಂದಿಗೆ ಪಟ್ಟಾ ಸಿಕ್ಕಿದೆ. ಆದರೂ ಅರಣ್ಯ ಇಲಾಖೆ ಅಧಿ ಕಾರಿಗಳು ವಿನಾಕಾರಣ ಅವರಿಗೆ ಕಿರು ಕುಳ ನೀಡುತ್ತಿದ್ದಾರೆ. ಹಲವೆಡೆ ಬೆಳೆದಿದ್ದ ಗೋವಿನ ಜೋಳ ಬೆಳೆಯನ್ನು ಯಾವುದೇ ಮುನ್ಸೂಚನೆ ನೀಡದೇ ನಾಶಪಡಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದು, ಇದರಿಂದ ನಾವು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನಮಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕು’ ಎಂದು ದಿಯೋಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
* *
ಸಿದ್ದಿ ಜನಾಂಗದ ಮೇಲೆ ಬಹುಸಂಖ್ಯಾತರಿಂದ ದೌರ್ಜನ್ಯ ನಡೆಯುತ್ತಿದ್ದು, ನ್ಯಾಯಯುತವಾಗಿ ಬದುಕಲು ನಮಗೆ ಅವಕಾಶ ಮಾಡಿಕೊಡಬೇಕು
ದಿಯೋಗ ಬಸ್ತ್ಯಾಂವ್ ಸಿದ್ದಿ
ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.