ನಾಗ್ಪುರ : ಭಾರತ ಕ್ರಿಕೆಟ್ ತಂಡದ ಆಟಗಾರ ಉಮೇಶ್ ಯಾದವ್ ಅವರ ಮನೆಗೆ ನುಗ್ಗಿದ ಕಳ್ಳರು ₹ 45 ಸಾವಿರ ನಗದು ಮತ್ತು ಎರಡು ಮೊಬೈಲ್ಗಳನ್ನು ಕದ್ದೊಯ್ದ ಘಟನೆ ಸೋಮವಾರ ನಡೆದಿದೆ.
‘ಉಮೇಶ್ ಅವರು ಲಕ್ಷ್ಮಿನಗರ ಪ್ರದೇಶದಲ್ಲಿರುವ ಬಹು ಅಂತಸ್ತಿನ ಕಟ್ಟಡದ ಒಂಬತ್ತನೆ ಮಹಡಿಯಲ್ಲಿ ನೆಲೆಸಿದ್ದಾರೆ. ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಕಿಟಕಿ ಗಾಜು ಒಡೆದು ಒಳ ನುಗ್ಗಿರುವ ಕಳ್ಳರು, ಹಣ ಮತ್ತು ಮೊಬೈಲ್ಗಳನ್ನು ಕದ್ದೊಯ್ದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಂಗಳವಾರ ಬೆಳಿಗ್ಗೆ ಸುಮಾರು 3. 30ಕ್ಕೆ ಉಮೇಶ್ ಕುಟುಂಬದವರು ಕಂಟ್ರೋಲ್ ಕೊಠಡಿಗೆ ಕರೆ ಮಾಡಿ ಕಳ್ಳತನವಾಗಿರುವ ವಿಷಯ ತಿಳಿಸಿದ್ದರು. ಕೂಡಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಎಂಟನೇ ಮಹಡಿಯಲ್ಲಿ ರಿಪೇರಿ ಕೆಲಸ ಮಾಡಲು ಬಂದಿದ್ದ ಇಬ್ಬರು ವ್ಯಕ್ತಿಗಳ ಮೇಲೆ ನಮಗೆ ಅನುಮಾನ ಮೂಡಿತ್ತು. ಹೀಗಾಗಿ ಅವರ ಪೈಕಿ ಒಬ್ಬನನ್ನು ಕರೆದು ವಿಚಾರಣೆ ನಡೆಸಿದ್ದೇವೆ. ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ’ ಎಂದು ಪೊಲೀಸ್ ಅಧಿಕಾರಿ ಬಿ.ಆರ್. ಖಂಡಾಲೆ ಹೇಳಿದ್ದಾರೆ.