ಬೀಜಿಂಗ್: ಸಿಕ್ಕಿಂ ವಲಯದ ದೋಕಲಾ ಪ್ರದೇಶದಲ್ಲಿ ಭಾರತವು ತನ್ನ ರಾಜಕೀಯ ಗುರಿ ಸಾಧಿಸಲು ‘ಅತಿಕ್ರಮಣ’ ವನ್ನು ‘ರಾಜನೀತಿ’ಯಾಗಿ ಬಳಸಿಕೊಳ್ಳಬಾರದು ಎಂದು ಚೀನಾ ಹೇಳಿದೆ. ಅಲ್ಲದೇ ಗಡಿಯಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಸೇನಾಪಡೆಗಳನ್ನು ಕೂಡಲೇ ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಭಾರತದ ಜತೆಗಿನ ಬಿಕ್ಕಟ್ಟಿನ ಕುರಿತು ಬೀಜಿಂಗ್ನಲ್ಲಿರುವ ವಿದೇಶಗಳ ರಾಜತಾಂತ್ರಿಕರ ಜತೆ ಚೀನಾ ಈ ವಿಷಯವನ್ನು ಹಂಚಿಕೊಂಡಿದೆ. ಆದರೆ, ಈ ವಿಷಯದ ಕುರಿತು ವಿಶೇಷ ಮಾಹಿತಿ ನೀಡಲಾಗಿದೆಯೇ ಎಂದು ಚೀನಾ ಖಚಿತಪಡಿಸಿಲ್ಲ.
‘ಭಾರತದ ಗಡಿ ಸಿಬ್ಬಂದಿಯು ಅತಿಕ್ರಮಣದ ಕುರಿತಂತೆ ಅನೇಕ ರಾಜತಾಂತ್ರಿಕರು ಆಘಾತ ವ್ಯಕ್ತಪಡಿಸಿದರು ಮತ್ತು ಇದು ನಿಜವೇ ಎಂದು ದೃಢೀಕರಿಸಲು ಆಗ್ರಹಿಸಿದ್ದಾರೆ’ ಎಂದು ಇಲಾಖೆ ವಕ್ತಾರ ಲು ಕಂಗ್ ತಿಳಿಸಿದರು.
ಚೀನಾದ ಸಾರ್ವಭೌಮತೆಗೆ ಧಕ್ಕೆ : ಸಿಕ್ಕಿಂ ವಲಯದ ಗಡಿಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಚೀನಾವು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ. ಈಗ ತಲೆದೋರಿರುವ ಘರ್ಷಣೆಯು ದೇಶದ ಎಲ್ಲ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಚೋದನೆ ನೀಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಸಿಕ್ಕಿಂ ವಲಯದ ದೋಕಲಾ ಪ್ರದೇಶದಲ್ಲಿ ಭಾರತವು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುವ ಮೂಲಕ ಚೀನಾದ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಪ್ರಮುಖ ದೈನಿಕ ‘ಗ್ಲೋಬಲ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.
ಭಾರತದ ಶಕ್ತಿ ಪರಿಗಣಿಸಲಿ: ಸಿಕ್ಕಿಂ ಗಡಿವಲಯದಲ್ಲಿನ ಬೆಳವಣಿಗೆ ಹೊಸ ಬಿಕ್ಕಟ್ಟು ಸೃಷ್ಟಿಸಿರುವಂತೆಯೇ, ‘ಭಾರತವು ಪರಿಗಣಿಸುವ ಶಕ್ತಿ’ ಎಂಬುದನ್ನು ಚೀನಾ ಅರಿತುಕೊಳ್ಳಬೇಕು ಎಂದು ಅಮೆರಿಕದ ನಿವೃತ್ತ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.
‘ಸುಳ್ಳು ಸುದ್ದಿ’
ಸಿಕ್ಕಿಂನಲ್ಲಿ ಭಾರತದ 150 ಯೋಧರನ್ನು ಹತ್ಯೆ ಮಾಡಲಾಗಿದೆ ಎಂಬ ಪಾಕಿಸ್ತಾನದ ಮಾಧ್ಯಮ ವರದಿ ಸುಳ್ಳು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಆನ್ಲೈನ್ ಪತ್ರಿಕೆ ‘ಪೀಪಲ್ಸ್ ಡೈಲಿ’ ಹೇಳಿದೆ.