ನವದೆಹಲಿ: ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರ ಸಂಪುಟ ದೊಡ್ಡ ಮಟ್ಟದಲ್ಲಿ ಪುನರ್ರಚನೆಯಾಗಲಿದೆ.
ಚೆನ್ನಾಗಿ ಕೆಲಸ ಮಾಡಿದ ಸಚಿವರಿಗೆ ಬಡ್ತಿ ಮತ್ತು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದವರನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ (2014ರ ನವೆಂಬರ್ ಮತ್ತು 2016ರ ಜುಲೈ) ಸಂಪುಟ ವಿಸ್ತರಣೆ ಆಗಿದೆ. ಆ. 11ಕ್ಕೆ ಮುಂಗಾರು ಅಧಿವೇಶನ ಮುಗಿಯಲಿದ್ದು, ಬಳಿಕ ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕಕ್ಕೆ ಆದ್ಯತೆ ಸಾಧ್ಯತೆ
ಈ ವರ್ಷದ ಕೊನೆಗೆ ಮತ್ತು ಮುಂದಿನ ವರ್ಷ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ಸಂಪುಟ ವಿಸ್ತರಣೆಯ ಮೇಲೆ ಪ್ರಭಾವ ಬೀರಲಿದೆ. ಮಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಹಾಗಾಗಿ ಕರ್ನಾಟಕಕ್ಕೆ ಕೇಂದ್ರ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ನಿರೀಕ್ಷೆ ಇದೆ.
ಸ್ಮೃತಿಗೆ ಇರಾನಿಗೆ ವಾರ್ತಾ ಖಾತೆ
ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿರುವ ವೆಂಕಯ್ಯ ನಾಯ್ಡು ಅವರ ಬಳಿಯಿದ್ದ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಸ್ಮೃತಿ ಅವರಿಗೆ ಈ ಸರ್ಕಾರದ ಆರಂಭದಲ್ಲಿ ಮಹತ್ವದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ನೀಡಲಾಗಿತ್ತು. ಹಲವು ವಿವಾದಗಳ ನಂತರ ಆ ಖಾತೆಯನ್ನು ಪ್ರಕಾಶ್ ಜಾವಡೇಕರ್ ಅವರಿಗೆ ನೀಡಲಾಗಿತ್ತು. ಇದು ಸ್ಮೃತಿ ಅವರಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿತ್ತು.