ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ. ರೇವಣ್ಣ, ಆರ್.ಬಿ. ತಿಮ್ಮಾಪೂರ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಗೀತಾ ಮಹದೇವ ಪ್ರಸಾದ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರೇವಣ್ಣ ಮತ್ತು ತಿಮ್ಮಾಪೂರ ಅವರಿಗೆ ಸಂಪುಟ ದರ್ಜೆ, ಗೀತಾ ಅವರಿಗೆ ರಾಜ್ಯ ಸಚಿವ ಖಾತೆ ಸ್ಥಾನ ನೀಡಲಾಗಿದೆ.
ಸಚಿವರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ನಿಧನ ಹಾಗೂ ಲೈಂಗಿಕ ಹಗರಣ ಆರೋಪಕ್ಕೆ ಗುರಿಯಾದ ಎಚ್. ವೈ. ಮೇಟಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಮರು ಆಯ್ಕೆಯಾದ ಜಿ. ಪರಮೇಶ್ವರ ರಾಜೀನಾಮೆಯಿಂದ ತೆರವಾದ ಸ್ಥಾನಗಳನ್ನು ಇದೀಗ ತುಂಬಲಾಗಿದೆ.
ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯಯ ನೇತೃತ್ವದ ಸಚಿವ ಸಂಪುಟ ಎಲ್ಲ ಸ್ಥಾನಗಳು ಭರ್ತಿ ಆದಂತಾಗಿದೆ. ಇಂದು ರಾತ್ರಿ ವೇಳೆಗೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.