ಕೋಯಿಕ್ಕೋಡ್: ಜಾತ್ಯತೀತ ಬರಹಗಾರರು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡದಿದ್ದರೆ ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿಯಾಗಲಿದೆ ಎಂದು ಹೇಳಿಕೆ ನೀಡಿದ ಹಿಂದೂ ಐಕ್ಯವೇದಿಯ ಕೇರಳ ಘಟಕದ ಅಧ್ಯಕ್ಷೆ ಕೆ.ಪಿ. ಶಶಿಕಲಾ (ಶಶಿಕಲಾ ಟೀಚರ್) ವಿರುದ್ಧ ಪರವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎರ್ನಾಕುಲಂನ ಉತ್ತರ ಪರವೂರಿನಲ್ಲಿ ಸೆಪ್ಟೆಂಬರ್ 8ರಂದು ಮಾಡಿದ್ದಾರೆ ಎನ್ನಲಾದ ಭಾಷಣದ ವಿರುದ್ಧ ಕಾಂಗ್ರೆಸ್ ಶಾಸಕ ವಿ.ಡಿ. ಸತೀಶನ್ ದೂರು ದಾಖಲಿಸಿದ್ದರು. ಇದರಂತೆ ಭಾರತೀಯ ದಂಡ ಸಂಹಿತೆಯ ವಿಧಿ 153ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬಳಸಿಕೊಂಡು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಶಶಿಕಲಾ ಟೀಚರ್ ಭಾಷಣದಲ್ಲಿ ಉಲ್ಲೇಖಿಸಿದ್ದರು.
‘ನೀವು ಹೆಚ್ಚು ಕಾಲ ಬದುಕಬೇಕು ಎಂದು ಬಯಸುತ್ತೀರಾದರೆ ನಿಮ್ಮ ಸಮೀಪದ ದೇಗುಲದಲ್ಲಿ ಮೃತ್ಯಂಜಯ ಪೂಜೆ (ದೀರ್ಘಾಯುಷ್ಯಕ್ಕಾಗಿ ಮಾಡುವ ಪೂಜೆ) ಮಾಡಿಸಿಕೊಳ್ಳಿ’ ಎಂದು ಶಶಿಕಲಾ ಹೇಳಿದ್ದರು. ಇದನ್ನು ಜಾತ್ಯತೀತ ಬರಹಗಾರರಿಗೆ ಒಡ್ಡಿದ ಬೆದರಿಕೆ ಎಂದು ಪರಿಗಣಿಸಲಾಗಿದೆ.