ಕಾರವಾರ (ಉತ್ತರ ಕನ್ನಡ): ಗೋವಾದ ಬೈನಾ ಕಡಲತೀರದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕನ್ನಡಿಗರನ್ನು ಶುಕ್ರವಾರ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಸಂತೈಸಿದರು.
ಗೋವಾ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ‘ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯದಾದ್ಯಂತ ಈ ಕುರಿತು ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗುವುದು’ ಎಂದು ಹೇಳಿದರು.
‘ಕಡಲತೀರದಲ್ಲಿ ಮನೆ ಮಾಡಿಕೊಂಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಕನ್ನಡಿಗರ ಮನೆಗಳನ್ನು ತೆರವು ಮಾಡಿರುವುದು ಅಮಾನವೀಯ. ಕಡಲತೀರದಲ್ಲಿ ಹೋಟೆಲ್, ರೆಸ್ಟೋರೆಂಟ್, ಮಳಿಗೆ ನಿರ್ಮಾಣಕ್ಕಾಗಿ ಪುನರ್ವಸತಿ ಕಲ್ಪಿಸದೇ ಕನ್ನಡಿಗರನ್ನು ಬೀದಿಗೆ ತಳ್ಳಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕರ್ನಾಟಕದಲ್ಲಿ ಲಿಂಗಾಯತ, ವೀರಶೈವ ಅಂತ ಜಗಳವಾತ್ತಾರೆ. ಆದರೆ ನಾವು ಬೈನಾದಲ್ಲಿ ಎಲ್ಲರೂ ಒಟ್ಟಿಗೆ ಸೇರಿ, ಬಸವಣ್ಣನ ಜಾತ್ರೆ ಮಾಡುತ್ತಿದ್ವಿ. ಆದರೀಗ ಗೋವಾ ಸರ್ಕಾರ ನಮ್ಮ ಬಸವಣ್ಣನ ಗುಡಿಯನ್ನೇ ಧ್ವಂಸ ಮಾಡಿದೆ. ಕರ್ನಾಟಕ ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ನಿರಾಶ್ರಿತ ಕನ್ನಡಿಗರು ಮನವಿ ಮಾಡಿದರು.