ಕುಕನೂರು: ಸಮೀಪದ ಮಸಬ ಹಂಚಿನಾಳ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬಗಳಿಲ್ಲ. ಆದರೂ ಹಿಂದೂಗಳೇ ಸೇರಿ ಅದ್ಧೂರಿಯಿಂದ ಮೊಹರಂ ಆಚರಿಸುತ್ತಾರೆ. ಹಿಂದೂ ಧರ್ಮೀಯರೇ ಸೇರಿ ಸುಂದರ ಮಸೀದಿ ನಿರ್ಮಿಸಿದ್ದಾರೆ. ಗ್ರಾಮಸ್ಥರು ಜಾತಿ ಬೇಧ ಮರೆತು ಮೊಹರಂ ಆಚರಿಸುತ್ತಾರೆ.
ಮೊಹರಂ ಆಚರಣೆ ನಿಮಿತ್ತ ಮೂರ್ನಾಲ್ಕು ದಿನಗಳ ಕಾಲ ಜರುಗುವ ಓದಿಸುವಿಕೆ, ದೇವರ(ಪಾಂಜಾ) ಕೆಂಡ ಸೇವೆ (ಅಗ್ನಿ ಹಾಯುವುದು), ದೇವರು ಹಾಗೂ ಡೋಲಿ ಹೊರುವುದು ಸೇರಿ ಎಲ್ಲ ಆಚರಣೆಗಳನ್ನೂ ಹಿಂದೂಗಳೇ ನಿರ್ವಹಿಸುತ್ತಾರೆ.
ಐದು ವರ್ಷದ ಹಿಂದೆ ಗ್ರಾಮಸ್ಥರೆಲ್ಲ ಸೇರಿ ಸುಂದರವಾದ ಹೊಸ ಡೋಲಿಯನ್ನು ನಿರ್ಮಿಸಿದ್ದು, ಮೊಹರಂ ಕೊನೆಯ ದಿನ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಹಿಂದೂಗಳು ಗುರುವಾರ ಮತ್ತು ಭಾನುವಾರ ಮಸೀದಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.
‘ನಮ್ಮೂರಾಗ ಮುಸ್ಲಿಂ ಜನ ಇಲ್ಲರಿ. ಆದ್ರೂ ನಾವೆಲ್ಲ ಕೂಡಿಕೊಂಡು ಭಾಳ ಛಲೊತ್ನಾಗಿ ಹಲೆಹಬ್ಬ (ಮೊಹರಂ) ಮಾಡ್ತಿವ್ರಿ. ದೇವರ ಪೂಜಾ ಮಾಡಕಾ ಯಾವ ಜಾತಿ ಆದ್ರ ಏನ್ರಿ. ದೇವ್ರ ಅಂದ್ರ ಎಲ್ಲ ಒಂದ ಅನಕೊಂಡು ಎಲ್ಲರೂ ಸೇರಿ ಚಂದಗೆ ಮಾಡ್ತಿವ್ರಿ.’ ಎನ್ನುತ್ತಾರೆ ಗ್ರಾಮದ ಮುಖಂಡ ತಿಮ್ಮಣ್ಣ ದೇವರಮನಿ.