ಶಹಾಪುರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನದಿಂದ ಸುರಿದ ಮಳೆ ರೈತರ ಮೊಗದಲ್ಲಿ ಖುಷಿ ತಂದಿದೆ. ಹಿಂಗಾರು ಬಿತ್ತನೆಗೆ ರೈತರು ಸಿದ್ಧರಾಗಿದ್ದು, ಹದಭರಿತ ಮಳೆಯಿಂದ ಹೆಚ್ಚು ಅನುಕೂಲವಾಗಿದೆ. ಜೋಳ, ಕಡಲೆ, ಶೇಂಗಾ ಬಿತ್ತನೆಯ ಕಾರ್ಯ ಚುರುಕುಗೊಳ್ಳಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದ್ದಾರೆ.
ಶುಕ್ರವಾರ ಹಾಗೂ ಶನಿವಾರ ಎರಡು ದಿನದಲ್ಲಿ ವಡಗೇರಾ ಹೋಬಳಿ ವ್ಯಾಪ್ತಿಯಲ್ಲಿ ದಾಖಲೆಯ 67 ಮಿ.ಮೀ ಮಳೆಯಾಗಿದೆ. ಅದರಂತೆ ಭೀಮರಾಯನಗುಡಿ 39, ಗೋಗಿ 42, ದೋರನಹಳ್ಳಿ 24, ಹಯ್ಯಾಳ 21, ಹತ್ತಿಗೂಡೂರ 38 ಮಿ.ಮೀ ಮಳೆಯಾಗಿದೆ.
ಈಗಾಗಲೇ ಬಿತ್ತನೆ ಮಾಡಿರುವ ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಗೆ ಅನುಕೂಲವಾಗಿದೆ. ಸದ್ಯಕ್ಕೆ ಮಳೆಯ ತೇವಾಂಶದ ಕೊರತೆ ಇಲ್ಲ ಎಂದು ಅವರು ತಿಳಿಸಿದರು.