ಬೆಂಗಳೂರು: ರೈಲು ಹಳಿಗಳಲ್ಲಿ ಬಿರುಕು ಬಿಟ್ಟಿರುವುದನ್ನು ಪತ್ತೆ ಮಾಡುವ ಸಾಧನವನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ವಿದ್ಯಾರ್ಥಿಗಳಾದ ಶಶಾಂಕ್ ಶಂಕರ್, ದಿಲೀಪ್ ಸಾಯಿವಿ, ಅರ್ಜುನ್ ಕಿಣಿ, ವಿ.ಅಖಿಲ್ ಹಾಗೂ ಶ್ರೇಯಸ್ ದತ್ತ ಶಿವರಾಮ ಅವರು ಪ್ರಾಧ್ಯಾಪಕ ರಘುನಂದನ್ ಮಾರ್ಗದರ್ಶನದಲ್ಲಿ ಈ ಸಾಧನವನ್ನು ಕಂಡುಹಿಡಿದಿದ್ದಾರೆ.
ನ್ಯಾಸ್ಕಾಂ ಹಾಗೂ ಬಾಯನ್ಸಿ ಕಂಪೆನಿಗಳ ಆಶ್ರಯದಲ್ಲಿ ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ತಂತ್ರಜ್ಞಾನ ಕ್ಷೇತ್ರದ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ’ಯಲ್ಲಿ ಈ ಸಾಧನವನ್ನು ಪ್ರದರ್ಶಿಸಿದ್ದು, ದ್ವಿತೀಯ ಬಹುಮಾನ ಲಭಿಸಿದೆ.
‘ರೈಲಿನ ಕೆಳಭಾಗದಲ್ಲಿ ಈ ಸಾಧನವನ್ನು ಅಳವಡಿಸಬಹುದು. ಇದು ಹಳಿಗಳ ಲೋಪಗಳನ್ನು ವೈಜ್ಞಾನಿಕವಾಗಿ ಪತ್ತೆ ಮಾಡಿ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ಅದೇ ಹಾದಿಯಲ್ಲಿ ಸಂಚರಿಸುವ ಮತ್ತೊಂದು ರೈಲನ್ನು ನಿಲ್ಲಿಸಿ, ಹಳಿಯನ್ನು ದುರಸ್ತಿ ಕಾರ್ಯ ಕೈಗೊಳ್ಳಬಹುದು’ ಎಂದು ವಿದ್ಯಾರ್ಥಿ ಶಶಾಂಕ್ ಶಂಕರ್ ತಿಳಿಸಿದರು.