ಅಫಜಲಪುರ: ಸೊನ್ನ ಭೀಮಾ ಏತ ನೀರಾವರಿ ಒಳಪಡುವ ಬಳುಂಡಗಿ ಕಾಲುವೆ ಮುಖಾಂತರ 40 ಕಿ.ಮೀ ಕಾಲುವೆ ಮಾತೋಳಿ ಗ್ರಾಮದ ಹತ್ತಿರ ಒಡೆದು ಹೋಗಿದ್ದರಿಂದ ರೈತರ ಜಮೀನು ಹಾಳಾಗುತ್ತಿದೆ. ಹೀಗಾಗಿ ರೈತರು ಬೆಳೆಯಿಲ್ಲದೇ ಪರದಾಡುವಂತಾಗಿದೆ.
ಬೆಳೆ ಕಳೆದುಕೊಂಡ ಮಾತೋಳಿ ಗ್ರಾಮದ ರೈತ ಮೊದಿನ್ಸಾಬ ಮಲೀಕಸಾಬ ನದಾಫ್ ಕಾಲುವೆ ಒಡೆದ ಬಗ್ಗೆ ಮಾಹಿತಿ ನೀಡಿ, ‘ನಮ್ಮ ಜಮೀನಿನಲ್ಲಿ ಭೀಮಾ ಕಾಲುವೆ ಹಾದು ಹೋಗಿದ್ದು, ಅದು ಒಡೆದು ಹೋಗಿದ್ದರಿಂದ ಕಾಲುವೆ ನೀರು ಜಮೀನಿನಲ್ಲಿ ಹರಿದಾಡುತ್ತಿದೆ. ಹೀಗಾಗಿ ಒಂದು ವರ್ಷದಿಂದ 5– 6 ಎಕರೆ ಜಮೀನು ಹಾಳಾಗುತ್ತಿದೆ.
ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. 5– 6 ಬಾರಿ ಅರ್ಜಿ ಸಲ್ಲಿಸಿದರೂ ಭೀಮಾ ಏತ ನೀರಾವರಿ ಇಲಾಖೆ ಎಂಜಿನಿಯರ್ಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹೇಳುತ್ತಾರೆ.
ಪೋಲಾಗುತ್ತಿರುವ ನೀರು: ‘ಭೀಮಾ ಕಾಲುವೆಯಿಂದ ರೈತರ ಜಮೀನಿಗೆ ಹರಿಯಬೇಕಾದ ನೀರು ಕಾಲುವೆ ಒಡೆದಿದ್ದರಿಂದ ನೀರು ಮುಂದೆ ಹರಿಯುತ್ತಿಲ್ಲ. ಹೀಗಾಗಿ ಮುಂದಿನ ರೈತರಿಗೆ ಕಾಲುವೆ ನೀರು ಸಿಗುತ್ತಿಲ್ಲ.
ಭೀಮಾ ಏತ ನೀರಾವರಿ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಕಾಲುವೆ ದುರಸ್ತಿ ಮಾಡಿಸಬೇಕು’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಬಿರಾದಾರ ಒತ್ತಾಯಿಸಿದ್ದಾರೆ.