ಲಿಂಗಸುಗೂರು: ಛಾವಣಿ ದಸರಾ ಮಹೋತ್ಸವ ನಿಮಿತ್ತ ಶನಿವಾರ ನಾಡ ದೇವತೆ ಭುವನೇಶ್ವರಿ ದೇವಿಯ ಶೋಭಾ ಯಾತ್ರೆ ಸಡಗರ, ಸಂಭ್ರಮದಿಂದ ಜರುಗಿತು.
ಅಂಬಾಭವಾನಿ ದೇವಸ್ಥಾನದ ಬಳಿ ಹೂವಿನಿಂದ ಅಲಂಕೃತಗೊಂಡ ವಾಹನದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಶಾಸಕ ಮಾನಪ್ಪ ವಜ್ಜಲ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಬಸವಸಾಗರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಗುರುಗುಂಟಾ ರಸ್ತೆ ಮೂಲಕ ಗಡಿಯಾರ ವೃತ್ತ, ಅಂಚೆ ಕಚೇರಿ, ಜೂನಿಯರ್ ಕಾಲೇಜು ಮುಂಭಾಗದಿಂದ ಬಸ್ ನಿಲ್ದಾಣ ವೃತ್ತ, ಐಎಂಎ ಕಟ್ಟಡ, ನ್ಯಾಯಾಲಯದ ಮುಂಭಾಗದಿಂದ ಬನ್ನಿ ಮಹಾಂಕಾಳೆ ದೇವಸ್ಥಾನದವರೆಗೆ ಭಾರಿ ಜನಸ್ತೋಮದ ಮಧ್ಯೆ ಸಾಗಿ ಬಂದಿತು. ಈ ಸಂದರ್ಭದಲ್ಲಿ ಯುವಕರು ಕಲಾ ತಂಡಗಳ ಜೊತೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.
ಬೆಂಗಳೂರಿನ ಪಂಜಾಬಿ ಭಾಂಗ್ರಾ ನೃತ್ಯ ತಂಡ, ನಾಸಿಕ್ ಡೋಲ್, ಗುಜರಾತಿ ಮಾರ್ವಾಡಿ ನೃತ್ಯ, ಕೋನಸಾಗರದ ಗಾರುಡಿ ಗೊಂಬೆಗಳು, ಮುದಗಲ್ನ ಹೆಜ್ಜೆ ಮೇಳೆ, ಹಸಮಕಲ್ನ ವೇಷಗಾರರು, ಸಿಂಧನೂರಿನ ಮಹಿಳಾ ವೀರಗಾಸೆ, ರಾಯಚೂರಿನ ಕರಡಿ ಮಜಲು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಈಶಪ್ಪ ಸಾಲ್ಮನಿ ನಿಡಿದ 60 ಕೆ.ಜಿ ತೂಕದ ಬೆಳ್ಳಿ ಖಡ್ಗದಿಂದ ಬನ್ನಿ ಮುಡಿಯುತ್ತಿದ್ದಂತೆ ಜಯಘೋಷ ಹಾಕುತ್ತ ಪುನಃ ದೊಡ್ಡ ಹನುಮಂತ ದೇವಸ್ಥಾನಕ್ಕೆ ಸಾಗಿ ಬಂದ ನಾಗರಿಕರು, ದೊಡ್ಡಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.