ಉಯ್ಯಂಬಳ್ಳಿ (ಕನಕಪುರ): ಉಯ್ಯಂಬಳ್ಳಿಯ ಶಿವಗಿರಿ ಕ್ಷೇತ್ರದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕ್ಷೇತ್ರದ ಅನ್ನದಾನನಾಥಸ್ವಾಮಿ ಅವರು ಕಳೆದ 25 ವರ್ಷಗಳಿಂದ ವಿಜಯದಶಮಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದಾರೆ.
ಒಂಬತ್ತು ದಿನಗಳ ಮುಂಚಿತವಾಗಿಯೇ ಅನ್ನಪೂರ್ಣೇಶ್ವರಿ ಮತ್ತು ಶಿವಾಲ್ದಪ್ಪ ದೇವರನ್ನು ಪಟ್ಟಕ್ಕೆ ಕೂರಿಸಿ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬಂದಿದ್ದರು.
ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮದ ಜನರು ಕ್ಷೇತ್ರಕ್ಕೆ ತೆರಳಿ ಪ್ರತಿದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ಕಾರ್ಯವನ್ನು ನೆರವೇರಿಸಿದರು. ಅಂತಿಮವಾಗಿ ಶನಿವಾರ ಕ್ಷೇತ್ರದಲ್ಲಿ ವಿಜಯದಶಮಿಯ ಅಂಗವಾಗಿ ಬನ್ನಿಪೂಜೆ ನಡೆಯಿತು.
ಅನ್ನದಾನನಾಥಸ್ವಾಮಿ ಅವರಿಗೆ ಬೆಳ್ಳಿಯ ಕಿರೀಟ ತೊಡಿಸಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಬನ್ನಿಪೂಜೆಗೆ ಕರೆದೊಯ್ಯಲಾಯಿತು. ಬನ್ನಿ ಮುಡಿಸಿದ ಬಾಳೆಕಂಬವನ್ನು ಕಡಿದು ಧಾರ್ಮಿಕ ಕಾರ್ಯವನ್ನು ನೆರವೇರಿಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಬನ್ನಿಸೊಪ್ಪನ್ನು ತೆಗೆದುಕೊಂಡರು.