ಚೆನ್ನೈ: ಅನಾರೋಗ್ಯದಿಂದ ನರಳುತ್ತಿರುವ ಪತಿ ಎಂ. ನಟರಾಜನ್ ಅವರ ಭೇಟಿಗಾಗಿ, 15 ದಿನಗಳ ಕಾಲ ಜೈಲಿನಿಂದ ಹೊರಗಿರಲು ಅನುಮತಿ ಕೋರಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ. ಕೆ. ಶಶಿಕಲಾ ಅವರು ಪೆರೋಲ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಕ್ಷದ ಬಂಡಾಯ ಶಾಸಕ ಹಾಗೂ ಮುಖಂಡ ಟಿ. ಟಿ. ವಿ ದಿನಕರನ್ ಹೇಳಿದ್ದಾರೆ.
ಯಕೃತ್ತು ಸಮಸ್ಯೆ ಎದುರಿಸುತ್ತಿರುವ ನಟರಾಜನ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ದಿನಕರನ್ ಅವರು ತಿಳಿಸಿದ್ದಾರೆ.
‘ಶಶಿಕಲಾ ಅವರಿಗೆ ಪೆರೋಲ್ ಸಿಗುವ ಬಗ್ಗೆ ನಂಬಿಕೆ ಇದೆ. ಜೈಲಿನಿಂದ ಹೊರಗಿರಲು ಎಷ್ಟು ದಿನಗಳವರೆಗೆ ಅನುಮತಿ ನೀಡಬೇಕೆಂಬುದನ್ನು ಬಂಧೀಖಾನೆ ಇಲಾಖೆ (ಕರ್ನಾಟಕ) ನಿರ್ಧರಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.