ಲಖನೌ: ’ಪ್ರೇಮದ ಸೌಧ’ವೆಂದೇ ಖ್ಯಾತಿ ಪಡೆದಿರುವ ಆಗ್ರಾದ ತಾಜ್ಮಹಲ್ ವೀಕ್ಷಿಸಲು ಪ್ರತಿ ವರ್ಷ ದೇಶ–ವಿದೇಶಗಳಿಂದ 60 ಲಕ್ಷ ಜನ ಬರುತ್ತಾರೆ. ಆದರೆ ವಿಶ್ವಪಾರಂಪರಿಕ ತಾಣವೆಂದು ಗುರುತಿಸಿಕೊಂಡಿರುವ ಈ ಪ್ರೇಮ ಸ್ಮಾರಕ, ಉತ್ತರ ಪ್ರದೇಶ ಸರ್ಕಾರದ ಪ್ರವಾಸಿಗರ ಆಕರ್ಷಣೆಯ ತಾಣಗಳಲ್ಲಿ ಈ ಬಾರಿ ಜಾಗ ಪಡೆದಿಲ್ಲ.
‘ವಿಶ್ವ ಪ್ರವಾಸೋದ್ಯಮ ದಿನ’ದ ಅಂಗವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ ಕಿರುಪುಸ್ತಕದಲ್ಲಿ ತಾಜ್ಮಹಲ್ ಅನ್ನು ಕೈಬಿಡಲಾಗಿದೆ. ಇಲಾಖೆಗೆ ತಾಜ್ಮಹಲ್ ಅತಿ ಹೆಚ್ಚು ಆದಾಯ ತಂದುಕೊಡುತ್ತಿದ್ದರೂ ರಾಜ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇದನ್ನು ಸೇರಿಸಿಯೇ ಇಲ್ಲ.
ಪ್ರವಾಸಿ ಸ್ಥಳಗಳ ಪರಿಚಯ ಪುಸ್ತಕದಲ್ಲಿ ರಾಜ್ಯದ ಎಲ್ಲ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸ್ಥಳಗಳನ್ನು ಉಲ್ಲೇಖ ಮಾಡಲಾಗಿದೆ. ಗಂಗಾ ಆರತಿ, ಮಥುರಾ, ವೃಂದಾವನ ಮತ್ತು ಅಯೋಧ್ಯೆ ಸ್ಥಾನ ಪಡೆದಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮುಖ್ಯಸ್ಥರಾಗಿರುವ ಗೋರಕ್ಷಾ ಪೀಠದ ಬಗ್ಗೆಯೂ ವಿವರಣೆ ಇದೆ.
ತಾಜ್ಮಹಲ್ ಅನ್ನು ಪರಿಚಯ ಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ವಿವರಣೆ ನೀಡಿಲ್ಲ.
‘ನಿರ್ದಿಷ್ಟ ಧರ್ಮಕ್ಕೆ ಸೇರಿದ ಸ್ಮಾರಕಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ವಿರೋಧ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
‘ತಾಜ್ಮಹಲ್ ಸುಂದರವಾದ ಕಟ್ಟಡ. ಆದರೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಇದು ಪ್ರತಿಬಿಂಬಿಸುವುದಿಲ್ಲ’ ಎಂದು ಆದಿತ್ಯನಾಥ್ ಈ ಹಿಂದೆ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.