ಬೆಂಗಳೂರು: ಕೌಸ್ತುಭ್ ಮತ್ತು ದೇವ್ ಅವರ ದಿಟ್ಟ ಆಟದಿಂದಾಗಿ ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ತಂಡದವರು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಕೇಂದ್ರ ವಲಯ ಅಂತರ ಕಾಲೇಜು ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಸಿ.ಎಂ.ಆರ್.ಐ.ಟಿ ಕಾಲೇಜಿನ ಅಂಗಣದಲ್ಲಿ ನಡೆದ ಫೈನಲ್ನಲ್ಲಿ ರಾಮಯ್ಯ ತಂಡ 33–22 ಪಾಯಿಂಟ್ಸ್ನಿಂದ ಬಿ.ಎಂ.ಎಸ್.ಸಿ.ಇ ತಂಡವನ್ನು ಮಣಿಸಿತು.
ಆರಂಭದಿಂದಲೇ ಚುರುಕಿನ ಆಟ ಆಡಿದ ರಾಮಯ್ಯ ತಂಡದ ಪರ ದೇವ್ ಮತ್ತು ಕೌಸ್ತುಭ್ ಕ್ರಮವಾಗಿ 10 ಮತ್ತು 12 ಪಾಯಿಂಟ್ಸ್ ಹೆಕ್ಕಿದರು. ತಂಡದ ಇತರ ಆಟಗಾರರಿಂದಲೂ ಶ್ರೇಷ್ಠ ಆಟ ಮೂಡಿಬಂತು. ಹೀಗಾಗಿ ಗೆಲುವಿನ ಹಾದಿ ಸುಗಮವಾಯಿತು.
ಬಿ.ಎಂ.ಎಸ್.ಸಿ.ಇ ತಂಡದ ಶ್ರೀರಾಮ್ (12) ಮತ್ತು ಕರಮ್ (8) ಅವರು ಸೋಲಿನ ನಡುವೆಯೂ ಗಮನ ಸೆಳೆದರು.
ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ ರಾಮಯ್ಯ ಕಾಲೇಜು ತಂಡ 47–30 ಪಾಯಿಂಟ್ಸ್ ನಿಂದ ನ್ಯೂ ಹೊರೈಜನ್ ಎದುರೂ, ಬಿ.ಎಂ.ಎಸ್.ಸಿ.ಇ ತಂಡ 25–15 ಪಾಯಿಂಟ್ಸ್ನಿಂದ ಬಿ.ಎನ್.ಎಂ.ಐ.ಟಿ ಮೇಲೂ ಗೆದ್ದಿದ್ದವು.
ರಾಮಯ್ಯ ತಂಡದ ಕೌಸ್ತುಭ್ (12) ಮತ್ತು ದೇವ್ (15) ಮಿಂಚಿನ ಆಟ ಆಡಿ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು. ಎಂ.ಎಸ್.ಸಿ.ಇ ತಂಡದ ಶ್ರೀರಾಮ್ 12 ಪಾಯಿಂಟ್ಸ್ ಸಂಗ್ರಹಿಸಿದ್ದರು.