ಬೆಂಗಳೂರು: ಕದಳಿ ಮಹಿಳಾ ವೇದಿಕೆಯ 2017ನೇ ಸಾಲಿನ ‘ಕದಳಿ’ ಪ್ರಶಸ್ತಿಯನ್ನು ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ವಿಜಯಶ್ರೀ ಸಬರದ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ₹ 5,000 ನಗದು ಬಹುಮಾನ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ, ‘ಇಂದಿನ ಸಮಾಜವು ತಾನು ನಡೆದಂತೆಯೇ ನಡೆಯಬೇಕು ಎಂಬ ನಿರೀಕ್ಷೆಯನ್ನು ಹೊಂದಿದೆ. ಹೀಗಾಗಿ, ಏನನ್ನೂ ಪ್ರಶ್ನೆ ಮಾಡದ ಸ್ಥಿತಿಯಲ್ಲಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಪ್ರಶ್ನೆ ಮಾಡಿದರೆ ಏನಾಗುತ್ತದೆ ಎಂದು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ಕೊಲೆಗಾರರಿಗೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯಾದರೇನು, ಪತ್ರಕರ್ತೆ ಗೌರಿ ಲಂಕೇಶ್ ಆದರೇನು. ಭಯಾನಕ, ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿರುವ ನಾವು ಎಚ್ಚರಗೊಂಡು ನಿರ್ಭೀತ ವಾತಾವರಣ ನಿರ್ಮಿಸಬೇಕಿದೆ’ ಎಂದರು.
‘ವಿಚಾರಧಾರೆಗಳನ್ನು ಪರಸ್ಪರ ಆತ್ಮೀಯವಾಗಿ ವಿನಿಮಯ ಮಾಡಿಕೊಳ್ಳಲಾಗದ, ಅನೀತಿ ಬಗ್ಗೆ ಚಕಾರವೆತ್ತದ ವಿಕೃತಮಯ ಹಾಗೂ ವಿವೇಚನಹೀನ ಈ ವ್ಯವಸ್ಥೆಯಿಂದ ಬಿಡುಗಡೆ ಹೊಂದಬೇಕಿದೆ. ಅದಕ್ಕಾಗಿ 12ನೇ ಶತಮಾನದ ಶರಣ–ಶರಣೆಯರ ವಿಚಾರಧಾರೆಗಳತ್ತ ಮುಖಮಾಡಬೇಕು’ ಎಂದರು.