ದಾವಣಗೆರೆ: ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅ.9ರಂದು ಬೆಳಿಗ್ಗೆ 11ಕ್ಕೆ ಪ್ರಜಾ ಪರಿವರ್ತನಾ ನೂತನ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಈಶ್ವರಪ್ಪ ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇನ್ನೂ ದೇಶದಲ್ಲಿ ಅಸಮಾನತೆ, ಸ್ತ್ರೀ ಶೋಷಣೆ, ಬಡಜನರ ಹಲವಾರು ಸಮಸ್ಯೆಗಳು ಕಡಿಮೆ ಆಗಿಲ್ಲ. ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಭ್ರಷ್ಟಾಚಾರಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನೂತನ ಪ್ರಜಾ ಪರಿವರ್ತನಾ ಸಮಾಜ ಸಜ್ಜಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ನೂತನವಾಗಿ ಆರಂಭವಾಗುತ್ತಿರುವ ವೇದಿಕೆಯ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲೆಯ 1,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಕೃಷ್ಣಪ್ಪ ಅರಕೆರೆ, ತಾಲ್ಲೂಕು ಅಧ್ಯಕ್ಷ ಕೆ.ಒ.ಹನುಮಂತಪ್ಪ, ಎಚ್.ಚಂದ್ರಶೇಖರ್, ಸಿದ್ದಪ್ಪ, ಸುರೇಶ್ ನಾಯ್ಕ, ನಾಗರಾಜ ಅವರೂ ಇದ್ದರು.