ದಸರಾ ಸೇರಿದಂತೆ ನಾಲ್ಕು ದಿನ ರಜೆ ಇದ್ದ ಕಾರಣ ಹೋಬಳಿಯ ಹಲವು ಗ್ರಾಮಗಳಿಗೆ ರಾಜಧಾನಿಯಿಂದ ಬಂದಿದ್ದ ಸಾವಿರಾರು ಜನರು ರಜೆ ಮುಗಿಸಿ, ರೈಲಿನಲ್ಲಿ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಎಲ್ಲರೂ ಟಿಕೆಟ್ ಸಹ ಪಡೆದಿದ್ದರು. ಮೈಸೂರಿನಿಂದ ಹಾಸನ ಮೂಲಕ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ಯಾಸೆಂಜರ್ ರೈಲು ಬಂದಿತ್ತು, ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ಒಂದು ನಿಮಿಷ ನಿಲ್ಲುವ ರೈಲನ್ನು, ಹೆಚ್ಚು ಜನ ಇದ್ದ ಕಾರಣ 6 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಆದರೆ ಅಪಾರ ಜನರು ಇದ್ದ ಕಾರಣ, ಬೋಗಿಗಳಲ್ಲಿ ಸ್ಥಳಾವಕಾಶ ಇಲ್ಲದೇ, ಹಿರೀಸಾವೆ ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿಗೆ ಹತ್ತಲಾಗಲಿಲ್ಲ. ಇದರಿಂದ ಕುಪಿತಗೊಂಡ ಟಿಕೆಟ್ ಪಡೆದ ಜನರು ಹಣವನ್ನು ಹಿಂದಿರುಗಿಸುವಂತೆ ರೈಲ್ವೆ ನಿಲ್ದಾಣದ ಅಧಿಕಾರಿಗಳ ಮೇಲೆ ಹರಿಹಾಯ್ದರು.